ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು, ಪ್ರಶ್ನೆ ಕೇಳಿದ ಮಹಿಳಾ ವರದಿಗಾರ್ತಿಯನ್ನು ಕರೆದು ಅವಮಾನಿಸಲು ಮುಂದಾಗಿ, ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.
”ಅಣ್ಣಾಮಲೈ ಅವರು ರಾಜ್ಯ ಘಟಕದ ಅಧ್ಯಕ್ಷರಾಗಿಲ್ಲದಿದ್ದರೆ ಬಿಜೆಪಿಯಲ್ಲೇ ಇರುತ್ತೀರಾ?” ಎಂದು ಮಹಿಳಾ ವರದಿಗಾರ್ತಿ ಅಣ್ಣಾಮಲೈ ಅವರನ್ನು ಕೇಳಿದಾಗ, ಇಂತಹ ಪ್ರಶ್ನೆಯನ್ನು ಯಾರು ಕೇಳಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿಯಬೇಕು ಹಾಗಾಗಿ ಅವರು ತಮ್ಮ ಬಳಿ ಬಂದು ನಿಲ್ಲುವಂತೆ ಹೇಳಿದ್ದಾರೆ.
”ನನಗೆ ಇಂತಹ ಪ್ರಶ್ನೆಯನ್ನು ಕೇಳಿದವರು ಯಾರು? ಅವರು ನನ್ನ ಪಕ್ಕದಲ್ಲಿ ಬಂದು ನಿಲ್ಲಿ.. ಟಿವಿ ಮೂಲಕ ಜನ ನೋಡಲಿ. ಪ್ರಶ್ನೆ ಕೇಳಲು ಒಂದು ಮಾರ್ಗವಿದೆ. ಇಂತಹ ಪ್ರಶ್ನೆ ಕೇಳಿದ ವ್ಯಕ್ತಿ ಯಾರೆಂದು 8 ಕೋಟಿ ಜನರಿಗೆ ತಿಳಿಯಬೇಕು” ಎಂದು ಅಣ್ಣಾಮಲೈ ಹೇಳಿದ್ದಾರೆ.
ಅಣ್ಣಾಮಲೈ ಅವರು ಮಹಿಳಾ ವರದಿಗಾರ್ತಿಗೆ ಕ್ಯಾಮೆರಾಗಳ ಮುಂದೆ ನಿಲ್ಲುವಂತೆ ಕೇಳುತ್ತಲೇ ಇದ್ದರು ಆದರೆ ಸಹ ವರದಿಗಾರರು ಅವರನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು.
”ನಾನು ಪೂರ್ಣ ಸಮಯದ ರಾಜಕಾರಣಿ ಅಲ್ಲ. ರೈತನಾಗಿರಲು ನಾನು ಬಯಸುತ್ತೇನೆ.. ಆನಂತರ ರಾಜಕಾರಣಿ ಮತ್ತು ನಂತರ ಬಿಜೆಪಿಯೊಂದಿಗೆ” ಎಂದು ಅವರು ಹೇಳಿದರು.
ಅಣ್ಣಾಮಲೈ ಅವರು ವರದಿಗಾರ್ತಿಗೆ ಆ ರೀತಿ ಹೇಳಿದ್ದಕ್ಕೆ ಸಹ ವರದಿಗಾರರು ಆಕ್ಷೇಪ ವ್ಯಕ್ತಪಡಿಸಿದರು. ಆ ಬಳಿಕ ಅಣ್ಣಾಮಲೈ ಅವರು ”ವರದಿಗಾರರಿಗೆ ಸರಿಯಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುವಂತೆ ಸಲಹೆ ನೀಡುತ್ತಿದ್ದೇನೆ” ಎಂದು ಹೇಳಿದರು.
”ಒಳ್ಳೆಯ ಉದ್ದೇಶದಿಂದ ನಾನು ನಿಮಗೆ ಸಲಹೆ ನೀಡುತ್ತಿದ್ದೇನೆ ಸಹೋದರಿ” ಎಂದು ಬಿಜೆಪಿ ನಾಯಕ ಹೇಳಿದರು.
ಕೊಯಮತ್ತೂರು ಪ್ರೆಸ್ ಕ್ಲಬ್ ಅಣ್ಣಾಮಲೈ ಅವರ ಕ್ರಮವನ್ನು ಖಂಡಿಸಿದೆ. ಪತ್ರಿಕೋದ್ಯಮ ನೀತಿಯನ್ನು ಸಾರುವ ಮೊದಲು ಅಣ್ಣಾಮಲೈ ಅವರು ನಾಯಕರಾಗುವ ನೀತಿಯನ್ನು ಕಲಿತು ಗೌರವಯುತವಾಗಿ ನಡೆದುಕೊಳ್ಳಬೇಕು. ಪತ್ರಿಕೋದ್ಯಮವು ನಾಗರಿಕರು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ನಡುವೆ ಸೇತುವೆಯಾಗಿ ನಿಂತಿದೆ ಎಂದು ಕೊಯಮತ್ತೂರು ಪ್ರೆಸ್ ಕ್ಲಬ್ ಅಧ್ಯಕ್ಷ ಎ.ಆರ್.ಬಾಬು ಹೇಳಿದರು.