ಕೆ.ಆರ್.ಪೇಟೆ ತಾಲೂಕಿನ ಅಘಲಯ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ವನಿತಾ ಶಂಕರೇಗೌಡ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಯಕ್ಷರಾದ ಹೇಮಾವತಿ ಲೋಕೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ವನಿತಾ ಶಂಕರೇಗೌಡ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆಯಿತು.
ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ಇಓ ಸತೀಶ್ , ಸಹ ಚುನಾವಣಾಧಿಕಾರಿಯಾಗಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಅನಿಲ್ ಬಾಬು, ಪಿಡಿಓ ಭುಜಬಲಿ ಜಕಾತಿ, ಕಾರ್ಯದರ್ಶಿ ವಿಷಕಂಠಾರಾಧ್ಯ ಕಾರ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷೆ ವನಿತಾ ಶಂಕರೇಗೌಡ ಮಾತನಾಡಿ, ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಸಮಗ್ರ ಅಭಿವೃದ್ದಿಗೆ ಎಲ್ಲಾ ಸದಸ್ಯರು ಹಾಗೂ ನೌಕರರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಪ್ರಮುಖವಾಗಿ ಕುಡಿಯುವ ನೀರು, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ನೂತನ ಅಧ್ಯಕ್ಷೆ ವನಿತಾ ಶಂಕರೇಗೌಡ ಅವರನ್ನು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎ.ಎನ್.ಜಾನಕೀರಾಂ , ತಾಲ್ಲೂಕು ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಎಸ್.ರಮೇಶ್, ಮುಖಂಡರಾದ ಡಿ.ಎಸ್.ನಾಗೇಂದ್ರ, ನಿವೃತ್ತ ಸೈನಿಕ ಶ್ಯಾಮಣ್ಣ, ನಿಂಗರಾಜು, ಮಂಜೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪುಟ್ಟೇಗೌಡ, ಸದಸ್ಯರಾದ ಅಣ್ಣೇಗೌಡ, ಆಶಾನಾಗೇಂದ್ರ, ಯೋಗೇಶ್, ಭಾರತೀ ತಮ್ಮಣ್ಣ, ಹೇಮಾವತಿ, ದಿವ್ಯ, ಸುನಿತಾ, ಕೆಂಪೇಗೌಡ, ತಮ್ಮಣ್ಣಗೌಡ, ಸುಮ, ತಮ್ಮಯ್ಯ, ನೇತ್ರಾವತಿ ಮತ್ತಿತರರು ಅಭಿನಂದಿಸಿದರು.