ಕವಿಗಳ ಸಾಕ್ಷಿಪ್ರಜ್ಷೆಯಾಗಿ ಕವಿತೆಗಳು, ಸಾಹಿತ್ಯಗಳು ಮೂಡಿಬರಬೇಕಿದೆ, ಕವಿತೆ, ಕವನಗಳಲ್ಲಿ ವೈವಿಧ್ಯತೆ ಇರಬೇಕು, ವಾಸ್ತವಿಕ ಸತ್ಯಗಳು, ಕಂಡ ಅನುಭವಗಳು ಅಕ್ಷರಗಳಾಗಿ ರೂಪುಗೊಳ್ಳಬೇಕಿದೆ ಎಂದು ಸಾಹಿತಿ ಪ್ರೊ.ಜಿ.ಟಿ.ವೀರಪ್ಪ ನುಡಿದರು.
ಮಂಡ್ಯ ನಗರದ ಗಾಂಧಿಭವನದಲ್ಲಿ ಕರುನಾಡ ಸಿರಿ ಸಂಪದ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಾಜ್ಯ ಘಟಕ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ-ಪುಸ್ತಕ ಬಿಡುಗಡೆ, ಸಾಧಕರಿಗೆ ಪುರಸ್ಕಾರ ಮತ್ತು ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಲವರು ಸಾಹಿತಿಗಳಾಗಿರುತ್ತಾರೆ, ಸಂಘಟಕರಾಗಿರುವುದಿಲ್ಲ, ಕೆಲವರು ಸಂಘಟಕರಾಗಿರುತ್ತಾರೆ, ಕಲಾವಿರು, ಸಾಹಿತಿಗಳಾಗಿರುವುದಿಲ್ಲ, ಆದರೆ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿ ಅವರು ಕಲಾವಿದರು, ಸಂಘಟಕರು ಮತ್ತು ಸಾಹಿತಿಗಳಾಗಿರುವುದು ಅಪರೂಪವಾಗಿದೆ ಬಹುಮುಖ ಪ್ರತಿಭಾವಂತರಾಗಿದ್ದಾರೆ ಎಂದು ನುಡಿದರು.
ಸಾಹಿತಿಯಾಗುವವರು ಕಲಾವಿದ, ಸಂಘಟಕರೂ ಆಗಬೇಕಿದೆ, ಆಗ ಹೆಚ್ಚು ಅನುಭವಗಳನ್ನು ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಳ್ಳು ಶಕ್ತಿ ಬರುತ್ತದೆ, ಅಭಿವ್ಯಕ್ತಿ ಅನುಭವ ಅನಾವರಣಗೊಳ್ಳಲು ಸುಲಭವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಮಾತನಾಡಿ, ಇಂದಿನ ಸಾಹಿತಿಗಳು ಸಮಾಜ ಕಟ್ಟುವ, ಸಂಸ್ಕಾರ, ವಿಜ್ಞಾನ, ವೈಜ್ಞಾನಿಕ ಮೌಲ್ಯಗಳ ಬಗ್ಗೆ ಬರೆಯಬೇಕಿದೆ, ಇನ್ನೊಬ್ಬರ ತೇಜೋವಧೆ, ಬೇರೆ ಮೆಚ್ಚಿಸಲಿಕ್ಕೆ, ನಿಂದನೆಗೊಳ್ಳಿಸುವ ಬರಹ, ಸಾಹಿತ್ಯ, ಕೃತಿಗಳು ಸಮಾಜಕ್ಕೆ ಮಾರಕ ಎಂಬುದನ್ನು ಮರೆಯಬಾರದು ಎಂದರು.
ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕಟ್ಟೆ ಎಂ.ಎಸ್.ಕೃಷ್ಣಸ್ವಾಮಿ, ನಿವೃತ್ತ ಪ್ರಾಂಶುಪಾಲೆ ಲಲಿತಾ ಕೆ.ಆಚಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ಉಪನ್ಯಾಸಕ ಗಿರೀಶ್ ಗಾಣದಾಳು, ವಾರ್ತಾಧಿಕಾರಿ ನಿರ್ಮಲ, ಸಾಧಕಿ ವೈ.ಎಚ್.ರತ್ನಮ್ಮ, ರಾಜೇಶ್ವರಿ ಚಿತ್ರದುರ್ಗ ಮತ್ತಿತರರಿದ್ದರು.