ಪ್ರಸ್ತುತ ಆಧುನಿಕ ಜೀವನ ಶೈಲಿಯಲ್ಲಿ ದಿನೇ ದಿನೇ ಸಂಕ್ರಾಂತಿಯ ಸಾಂಪ್ರದಾಯಿಕ ಸೊಗಡು ಮರೆಯಾಗುತ್ತಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ಜಯರಾಂ ಹೇಳಿದರು.
ಮಂಡ್ಯ ನಗರ ಸಮೀಪವಿರುವ ಕಾವೇರಿನಗರ ಬಡಾವಣೆಯ 2ನೇ ಹಂತದ ಬಸ್ನಿಲ್ದಾಣ ಬಳಿ ಗೋ ರಕ್ಷಣಾ ಸಮಿತಿ ಹಾಗೂ ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಆಯೋಜಿಸಿದ್ದ ಸಂಕ್ರಾಂತಿ ಹಬ್ಬ ಪ್ರಯುಕ್ತ 4ನೇ ವರ್ಷದ ಗೋ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲೋ ಒಂದು ಕಡೆ ನಾವೆಲ್ಲರೂ ಚಿಕ್ಕಂದಿನಲ್ಲಿ ನೋಡಿದ ವಿಜೃಂಭಣೆಯ ಸಂಕ್ರಾಂತಿ ವೈಭವ ಇಂದಿನ ಮಕ್ಕಳು ನೋಡಲು ಸಾಧ್ಯವಾಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿದ್ದ ಸಂಕ್ರಾಂತಿ ಸಂಭ್ರಮ ದಿನೇ ದಿನೇ ಮರೆಯಾಗುತ್ತಿದೆ ಎಂದು ನುಡಿದರು.
ಜೆಡಿಎಸ್ ಮುಖಂಡ ರಾಮಚಂದ್ರ ಮಾತನಾಡಿ, ಸ್ಥಳೀಯ ನಿವಾಸಿಗಳು ಒಗ್ಗೂಡಿ ಗೋ ಪೂಜೆ ಮಾಡುತ್ತಿರುವುದು ಉತ್ತಮ, ತುಂಬ ಖುಷಿಯಾಗುತ್ತಿದೆ, ನಾವು ಚಿಕ್ಕವರಿದ್ದಾಗ ಸಂಕ್ರಾಂತಿ ಹಬ್ಬವನ್ನು ಸಡಗರದಿಂದ ಆಚರಿಸುತ್ತಿರುವುದನ್ನು ನೋಡಿ ಬೆಳೆದಿದ್ದೇವೆ ಎಂದು ಹೇಳಿದರು.
ಗ್ರಾಮೀಣ ವ್ಯಾಪ್ತಿಯ ಕಣದಲ್ಲಿ ರಾಶಿಕಟ್ಟಿ ಪೂಜೆ ಮಾಡಿ, ಉತ್ಸವ ಮಾಡುತ್ತಿದ್ದರು, ನಂತರದ ದಿನಗಳಲ್ಲಿ ಇದೇಲ್ಲ ಮರೆತೋ ಹೊಗಿತ್ತು, ಇಂದು ನಗರ ಪ್ರದೇಶದಲ್ಲಿ ರಾಶಿ ಮತ್ತು ರಾಸು ಪೂಜೆ ಮಾಡಿತ್ತಿರುವುದು ಖುಷಿತಂದಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ದಂಪತಿಗಳು ಮತ್ತು ನಿವಾಸಿಗಳು ಗೋ ಪೂಜೆ ನೆರವೇರಿಸಿ, ಭತ್ತ-ರಾಗಿ ರಾಶಿಗೂ ಪೂಜೆ ಸಲ್ಲಿಸಿದರು. ಪೊಂಗಲ್ ಮತ್ತು ಸಿಹಿ ವಿತರಣೆ ನಡೆಯಿತು. ಮಕ್ಕಳು ಮತ್ತು ಯುವಕರು ತಮಟೆ-ನಗಾರಿ ನಾದಕ್ಕೆ ಕುಣಿದು ಕುಪ್ಪಳಿಸಿದರು. ಪ್ರಮುಖ ಬೀದಿಗಳಲ್ಲಿ ಗೋವುಗಳನ್ನು ಮೆರವಣಿಗೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಮುಖಂಡ ಎಚ್.ಆರ್.ಅಶೋಕ್ಕುಮಾರ್ ಮಾತನಾಡಿದರು. ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜ್, ಅಪ್ಪಾಜಪ್ಪ, ಪ್ರಮೋದ್, ವೀರಭದ್ರ, ಡಾ.ಎಸ್.ನಾರಾಯಣ್, ನಾರಾಯಣಸ್ವಾಮಿ, ನವೀನ್, ಜಯರಾಮ್, ಸಂದೇಶ್ ಮತ್ತು ಗೋ ರಕ್ಷಣಾ ಸಮಿತಿ ಸದಸ್ಯರು, ಕಾವೇರಿನಗರ, ದ್ವಾರಕನಗರ, ಶ್ರೀರಾಮನಗರ ನಿವಾಸಿಗಳು ಹಾಜರಿದ್ದರು.