ತಮಿಳುನಾಡು ಅಕ್ರಮವಾಗಿ 3.90 ಎಕರೆ ಪ್ರದೇಶದಲ್ಲಿ ಕುರುವೈ ಬೆಳೆ ಬೆಳೆಯುತ್ತಿದೆ. ಅಕ್ಟೋಬರ್ನಿಂದ ಪ್ರಾರಂಭವಾಗುವ ನಾರ್ತ್ ಈಸ್ಟರ್ನ್ ಮಾನ್ಸೂನ್ನಿಂದ ತಮಿಳುನಾಡಿಗೆ 270 ಟಿಎಂಸಿ ಗಿಂತಲೂ ಹೆಚ್ಚಿನ ಮಳೆ ನೀರು ಸಂಗ್ರಹವಾಗುತ್ತದೆ. ಈ ಸಂಬಂಧ ಕಳೆದ 10 ವರ್ಷಗಳ ಮಾಹಿತಿಯನ್ನು ಸುಪ್ರೀಂಕೋರ್ಟ್ ಗೆ ಕರ್ನಾಟಕ ಸರಕಾರ ನೀಡಿದ್ದರೆ ನಮಗೆ ನ್ಯಾಯ ಸಿಗುವ ಅವಕಾಶವಿತ್ತು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣಗೌಡ ಹೇಳಿದರು.
ಮಂಡ್ಯ ನಗರದ ಸರ್ಎಂವಿ ಪ್ರತಿಮೆ ಬಳಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರದಲ್ಲಿ ಶನಿವಾರ ಭಾಗವಹಿಸಿ ಮಾತನಾಡಿದ ಅವರು, ಈ ಯಾವುದೇ ಮಾಹಿತಿಯನ್ನು ಸುಪ್ರೀಂಕೋರ್ಟ್ ಗೆ ನೀಡುವ ಕೆಲಸವನ್ನು ಕರ್ನಾಟಕ ಸರಕಾರ ನೀಡಿಲ್ಲ. ಇವತ್ತಿಗೂ ಸಹ ಸುಪ್ರೀಂಕೋರ್ಟ್ ಆದೇಶಕ್ಕೆ ವಿರುದ್ದವಾಗಿ ತಮಿಳುನಾಡು ಅಕ್ರಮವಾಗಿ ಬೆಳೆಗಳನ್ನು ಬೆಳೆದಿರುವುದನ್ನು ರಾಜ್ಯದ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ನ್ಯಾಯಾಲಯಕ್ಕೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರಕಾರದ ನಾಯಕರು ತಮಿಳುನಾಡು ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇಸ್ರೋ ನೆರವು ಪಡೆದು ತಮಿಳುನಾಡಿನ ಬೆಳೆಗಳು ಮತ್ತು ನೀರಿನ ಪರಿಸ್ಥಿತಿ ಬಗ್ಗೆ ಸ್ಯಾಟಲೈಟ್ ಮತ್ತು ಡ್ರೋನ್ ಸರ್ವೇ ಮಾಡಿಸಿ ಕೋರ್ಟ್ ಮತ್ತು ಪ್ರಾಧಿಕಾರಕ್ಕೆ ಕೊಡಲಿ. ಖಂಡಿತಾ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಪಮುಖ್ಯಮಂತ್ರಿಯಾಗಿ ಮುಂದುವರಿಯಲು ಯಾವುದೇ ರೀತಿ ನೈತಿಕತೆಯಿಲ್ಲ. ವಾಡಿಕೆಗಿಂತಲೂ ಮಳೆ ಕಡಿಮೆಯಾಗಿದ್ದರೂ ಸಹ ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಮಂಡ್ಯ ರೈತರಿಗೆ ಭತ್ತ ಬೆಳೆಯಬೇಡಿ. ಖುಷ್ಕಿ, ಅರೆ ಖುಷ್ಕಿ ಬೆಳೆ ಬೆಳೆಯಿರಿ ಎಂದು ಸಲಹೆ ನೀಡುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಕಾಲ ಕಳೆಯುತ್ತಿದ್ದಾರೆ. ಇದೊಂದು ಜನ ವಿರೋಧಿ, ರೈತರ ದ್ರೋಹಿ ಸರಕಾರ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.