Friday, September 20, 2024

ಪ್ರಾಯೋಗಿಕ ಆವೃತ್ತಿ

ಅಧಿಕಾರ ಶಾಶ್ವತವಲ್ಲ: ಅಧಿಕಾರ ಸಿಕ್ಕಾಗ ಒಳ್ಳೆಯ ಕೆಲಸ ಮಾಡಬೇಕು

ಯಾರಿಗೂ ಅಧಿಕಾರ ಮುಖ್ಯವೂ ಅಲ್ಲ, ಶಾಶ್ವತವೂ ಅಲ್ಲ. ಅಧಿಕಾರ ಸಿಕ್ಕಾಗ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಪಾಂಡವಪುರ ತಾಲೂಕಿನ ಬೇಬಿ ಗ್ರಾಮದ ಶ್ರೀ ದುರ್ದಂಡೇಶ್ವರ ಮಹಂತ ಶಿವಯೋಗಿಗಳ ಮಠದಲ್ಲಿ ನಡೆದ ಶತಾಯುಷಿ ಲಿಂಗೈಕ್ಯ ಶ್ರೀ ಮರಿದೇವರು ಶಿವಯೋಗಿ ಮಹಾಸ್ವಾಮೀಜಿಯವರ 14ನೇ ವರ್ಷದ ಪುಣ್ಯಸ್ಮರಣೆ ಹಾಗೂ 6ನೇ ವರ್ಷದ ಮಹಾ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ಶ್ರೀಗಳ ಸ್ಮರಣೆಯಲ್ಲಿ ‘ಜೀವನದಿ’ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೊಳಿಸುವುದು ನನ್ನ ಕನಸ್ಸಾಗಿತ್ತು. ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಅದನ್ನು ಜಾರಿಗೊಳಿಸಿದೆ. ಬಡವರ ಮನೆಯಲ್ಲಿ ಜನಿಸುವ ಹೆಣ್ಣು ಮಗಳು ಶಾಪವಾಗಬಾರದು ಎಂದು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದು ಆಕೆಗೆ 18 ವರ್ಷ ತುಂಬಿದಾಗ 1ಲಕ್ಷ ಹಣ ಪಡೆದು ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸಲು ಸಹಾಯವಾಗಲಿ ಎಂದು ಐತಿಹಾಸಿಕ ಯೋಜನೆ ಜಾರಿ ಮಾಡಿದೆ ಎಂದರು.

ರೈತರಿಗೆ ಉತ್ತೇಜನ ನೀಡುವ ಸಲುವಾಗಿ ಹಾಲಿಗೆ ಪ್ರೋತ್ಸಾಹ ಧನವನ್ನೂ ನೀಡಿದೆ.ಹಾಲು ಉತ್ಪಾದಕರಲ್ಲಿ ಹೆಣ್ಣು ಮಕ್ಕಳು ಹೆಚ್ಚು. ಅವರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಲು ಪ್ರೋತ್ಸಾಹ ಧನ ನೀಡಿದೆ‌. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದಾಗ ಮಾದರಿ ರಾಜ್ಯವನ್ನಾಗಿ ಮಾಡುವ ಹಂಬಲದಿಂದ ಪ್ರಾಮಾಣಿಕವಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಇಡೀ ವಿಶ್ವವೇ ಅಚ್ಚರಿಪಡುವ ರೀತಿ ಪ್ರಧಾನಿ ಮೋದಿಯವರು ಅಮಿತ್ ಷಾ ಜತೆ ಸೇರಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಈ ದಿನ ಬೆಂಗಳೂರಿನಲ್ಲೇ ಉಳಿಯಬೇಕಾದ ಅನಿವಾರ್ಯತೆ ಇತ್ತು. ಆದರೆ ಕಾರ್ಯಕ್ರಮಕ್ಕೆ ಬಂದಿದ್ದು ಸಾರ್ಥಕವಾಯಿತು. ಬರದಿದ್ದರೆ ದೊಡ್ಡ ಅಪರಾಧವಾಗುತ್ತಿತ್ತು ಎಂದ ಅವರು, ಈ ಸನ್ಮಾನ ನನಗಲ್ಲ, ನಾಡಿನ ಜನತೆಗೆ ಸಿಗಬೇಕು, ಏಕೆಂದರೆ ಅವರಿಂದಲೇ ನನಗೆ ಎಲ್ಲಾ ಅಧಿಕಾರ ಸಿಕ್ಕಿದೆ ಎಂದರು.

ತಾಯಂದಿರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು. ಮಕ್ಕಳು ವಿದ್ಯಾವಂತರಾಗಿ ಸ್ವಂತ ಕಾಲು ಮೇಲೆ ನಿಂತರೆ ಸಂಸಾರ ಸಾಕುವ ಜೊತೆಗೆ ಪಾಲಕರಿಗೆ ಗೌರವ ತಂದುಕೊಡುವ ಕೆಲಸ ಮಾಡುತ್ತಾರೆ. ಹೀಗಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ತ್ರಿನೇತ್ರ ಸ್ವಾಮೀಜಿ ಅವರ ಪರಿಶ್ರಮದಿಂದ ಶ್ರೀಮಠದ ಚಿತ್ರಣ ಬದಲಾಗಿದೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸರ್ಕಾರದಿಂದ ಅಗತ್ಯ ಸೌಕರ್ಯ ಒದಗಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭಸಂದರ್ಭದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಗೌರವ ತಂದುಕೊಡಬೇಕು ಎಂದು ಮನವಿ ಮಾಡಿದ ಅವರು, ಶ್ರೀಮಠದ ಹಿರಿಯ ಶ್ರೀಗಳ ಆಶೀರ್ವಾದ, ಮಾರ್ಗದರ್ಶನದಲ್ಲಿ ನಾನು ಮುನ್ನಡೆದಿದ್ದೇನೆ. ಒಳ್ಳೆಯ ಭವಿಷ್ಯವಿದೆ, ಗಟ್ಟಿಯಾಗಿ ಮುನ್ನಡೆ ಎಂದಿದ್ದರಿಂದ ಈ ದಿನ ಅವರ ಆಶೀರ್ವಾದ ಹಾಗೂ ರಾಜ್ಯದ ಜನರ ಆಶೀರ್ವಾದದಿಂದ ಇಷ್ಟು ಎತ್ತರಕ್ಕೆ ಬೆಳೆದು ನಾಡಿನ ಉದ್ದಲಗಕ್ಕೂ ಹೆಸರುವಾಸಿಯಾಗಿದ್ದೇನೆ ಎಂದರು.

ಶ್ರೀಮಠದ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದ ರೇಷ್ಮೆ, ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾತನಾಡಿ, ರಾಜಕೀಯ ಕಲಿಯಬೇಕಿದ್ದರೆ ಅದು ಶಾಸಕ ಸಿ.ಎಸ್.ಪುಟ್ಟರಾಜು ಅವರಿಂದ ಕಲಿಯಬೇಕು. ನಾವು ತಲೆಗೆ ಎಣ್ಣೆ ಹಾಕಿದರೆ ಅವರು ಮೈಗೆಲ್ಲ ಎಣ್ಣೆ ಹಾಕ್ತಾರೆ. ಅವರ ರಾಜಕಾರಣ ಹತ್ತಿರದಿಂದ ನೋಡಿದ್ದೇನೆ.24*7 ಮಾದರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವ ಜತೆಗೆ ರಾಜಕಾರಣವು ಮಾಡುತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಮಾಜಿ ಸಿಎಂ ಯಡಿಯೂರಪ್ಪ ಅವರಂತೆಯೇ ಶ್ರೀಮಠದೊಂದಿಗೆ ನನಗೂ ಅವಿನಾಭಾವ ಸಂಬಂಧ ಇದೆ. ಒತ್ತಡ ಬಂದ ವೇಳೆ ಶ್ರೀಮಠಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಿರಿಯ ಶ್ರೀಗಳು ಈ ಭಾಗಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಹಾಗೆಯೇ ತ್ರಿನೇತ್ರ ಸ್ವಾಮೀಜಿ ಕೂಡ ಶ್ರೀಮಠದ ಅಭಿವೃದ್ಧಿಗೆ ಅವಿರತ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಚಂದ್ರವನ ಆಶ್ರಮ ಮತ್ತು ಬೇಬಿ ಮಠದ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ, ಹಾನಗಲ್‌ನ ಡಾ.ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಸಂಸದೆ ಸುಮಲತಾ ಅಂಬರೀಶ್, ಬಿಜೆಪಿ ಮುಖಂಡರಾದ ರಘು ಕೌಟಿಲ್ಯ, ಡಾ.ಎನ್.ಎಸ್.ಇಂದ್ರೇಶ್, ಮಹದೇವಸ್ವಾಮಿ, ಜಿ.ಪಂ ಮಾಜಿ ಸದಸ್ಯ ಸಿ.ಅಶೋಕ್, ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಎಂ.ಸುಬ್ರಹ್ಮಣ್ಯ, ನಿರಂಜನಬಾಬು, ಎಂ.ರಾಜಕುಮಾರ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!