ಉತ್ತರಾಖಂಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಯೋಗ ಗುರು ಬಾಬಾ ರಾಮ್ದೇವ್ ಅವರಿಗೆ ಅದೇ ರಾಜ್ಯದಲ್ಲಿ ತೀವ್ರ ಮುಖಭಂಗವಾಗಿದೆ.
ಅವರ ಕಂಪನಿಯ ಐದು ಔಷಧಿಗಳ ಉತ್ಪಾದನೆ ಮತ್ತು ಜಾಹೀರಾತುಗಳನ್ನು ಉತ್ತರಾಖಂಡ ಸರ್ಕಾರ ನಿಷೇಧಿಸಿದೆ.
ಪತಂಜಲಿ ಗ್ರೂಪ್ನ ದಿವ್ಯ ಫಾರ್ಮಸಿಯ ಆಯುರ್ವೇದಿಕ್ ಮತ್ತು ಯುನಾನಿ ಸೇವೆಗಳ ಸುಳ್ಳು ಪ್ರಚಾರದ ಬಗ್ಗೆ ಉತ್ತರಾಖಂಡ ಅಧಿಕಾರಿಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ದಿವ್ಯ ಫಾರ್ಮಸಿಯು ‘ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಆಕ್ಟ್ ನಿಯಮಗಳನ್ನು ಹಲವಾರು ಬಾರಿ ಉಲ್ಲಂಘಿಸಿದೆ.
ಈ ಉತ್ತರಾಖಂಡ ಆಯುರ್ವೇದಿಕ್ ಮತ್ತು ಯುನಾನಿ ಸೇವೆಗಳ ಪರವಾನಗಿ ಅಧಿಕಾರಿ ಡಾ.ಜಿ ಸಿ.ಎಸ್ ಜಂಗಪಾಂಗಿ ಅವರು ಔಷಧ ಉತ್ಪಾದನೆಯನ್ನು ನಿಲ್ಲಿಸುವಂತೆ ದಿವ್ಯ ಫಾರ್ಮಸಿಗೆ ಪತ್ರ ಬರೆದಿದ್ದಾರೆ.
ದಿವ್ಯ ಮಧುಗ್ರಿತ್, ದಿವ್ಯ ಐಗ್ರಿಟ್ ಗೋಲ್ಡ್, ದಿವ್ಯಾ ಥೈರೋಗ್ರಿಟ್, ದಿವ್ಯ ಬಿಪಿಗ್ರಿಟ್ ಹಾಗೂ ದಿವ್ಯಲಿಪಿಡೋಮ್ ಔಷಧಿಗಳ ಉತ್ಪಾದನೆಯನ್ನು ತಕ್ಷಣವೇ ನಿಲ್ಲಿಸುವಂತೆ ಅವರು ಫಾರ್ಮಸಿಗೆ ಆದೇಶಿಸಿದ್ದಾರೆ.
ಮಧುಮೇಹ, ಕಣ್ಣಿನ ಸೋಂಕು, ಥೈರಾಯ್ಡ್, ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ (ಕೊಬ್ಬು)ಅನ್ನು ನಿಯಂತ್ರಣದಲ್ಲಿಡಲು ಈ ಔಷಧಿಗಳನ್ನು ಬಳಸುವಂತೆ ಪತಂಜಲಿ ಸಂಸ್ಥೆ ಪ್ರಚಾರ ನಡೆಸುತ್ತಿದೆ.