ಜನರು ಶಾಂತಿಯಿಂದ ಬದುಕುವುದು ಕಾಂಗ್ರೆಸ್-ಬಿಜೆಪಿಗೆ ಬೇಕಿಲ್ಲ.ಅದಕ್ಕಾಗಿಯೇ ದಿನ ನಿತ್ಯ ಒಂದೊಂದು ವಿವಾದಾತ್ಮಕ ವಿಷಯಗಳನ್ನು ಎತ್ತಿ ನೆಮ್ಮದಿಯಾಗಿರುವ ಜನರ ಭಾವನೆಗೆ ಧಕ್ಕೆ ತಂದು ಅಶಾಂತಿ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಕಿಡಿಕಾರಿದರು.
ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ, ಚಿನ್ನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 7 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದ ಎಲ್ಲಾ ಜಾತಿಯ ಜನರು ಶಾಂತಿ-ಸಹಬಾಳ್ವೆಯಿಂದ ಜೀವನ ಸಾಗಿಸುವ ವಾತಾವರಣ ನಿರ್ಮಿಸಬೇಕಾದ ಎರಡು ರಾಜಕೀಯ ಪಕ್ಷಗಳು ಹಿಜಾಬ್,ಹಿಂದುತ್ವ ಎಂದು ವಿವಾದಾತ್ಮಕವಾಗಿ ಮಾತನಾಡುತ್ತಾ ಶಾಂತಿ ಕದಡಲು ಹೊರಟಿವೆ.ಇದನ್ನು ಅರಿತಿರುವ ರಾಜ್ಯದ ಜನರು ರೈತಾಪಿ ವರ್ಗದ ಹಿನ್ನೆಲೆಯಿರುವ ಜೆಡಿಎಸ್ನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.
ಅಶಾಂತಿ ಸೃಷ್ಟಿ
ನಮ್ಮದು ಹಿಂದೂ ರಾಷ್ಟ್ರವಾಗಿದ್ದು, ಅದನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ನಾಯಕರಾದವರು, ಸರಿಯಾದ ರೀತಿಯಲ್ಲಿ ಮಾತನಾಡಬೇಕು.ಈ ರೀತಿ ಅಶಾಂತಿ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ಎರಡು ರಾಷ್ಟ್ರೀಯ ಪಕ್ಷಗಳು ರಾಜ್ಯದ ಅಭಿವೃದ್ಧಿಯನ್ನು ಮರೆತಿವೆ.ರಾಜ್ಯದಲ್ಲಿ ಸಾಕಷ್ಟು ಮಳೆ ಬಂದು ರಸ್ತೆಗಳು ಗುಂಡಿ ಬಿದ್ದಿವೆ.ಮನೆಗಳು ಕುಸಿದಿವೆ.ಈ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು ಕಚ್ಚಾಡುತ್ತಿವೆ. ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಜನಸಾಮಾನ್ಯರಿಗೆ ಅನುಕೂಲವಾಗುವ ಕಾರ್ಯಕ್ರಮವಾಗಿದ್ದು,ಜನರು ಜೆಡಿಎಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ ಎಂದರು.
24 ಕೋಟಿ ಬಿಡುಗಡೆ
ಕೋಟೆ-ಕೊತ್ತಲಗಳನ್ನು ಸಂರಕ್ಷಿಸಲು 24 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಪ್ರಾಚ್ಯವಸ್ತು ಇಲಾಖೆಯ ಅಸಹಕಾರದ ನಡುವೆಯೂ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದರು.
ಚಿರತೆ ಸೆರೆಗೆ ಕ್ರಮ
ಕೆಆರ್ ಎಸ್ ಸೇರಿದಂತೆ ವಿವಿಧ ಗ್ರಾಮ ಹಾಗೂ ಪಟ್ಟಣಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಹಾವಳಿ ಸಂಬಂಧ ಸದನದಲ್ಲಿ ಚರ್ಚಿಸಲಾಗುವುದು. ಚಿರತೆ ಸೆರೆ ಸಂಬಂಧ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮ ತೆಗೆದುಕೊಳ್ಳುವೆ ಎಂದರು.