ಜಾ ದಳ ಹಾಗೂ ಕಾಂಗ್ರೆಸ್ ಮೈತ್ತಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವಲ್ಲಿ ನನ್ನದೂ ಸಹ ಸಣ್ಣ ಪ್ರಯತ್ನ ಇದೆ ಎಂದು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ಪಟ್ಟಣದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು,ಬಸ್ ಗಳಲ್ಲಿ ಅಥವಾ ಕಾರ್ಯಕ್ರಮದಲ್ಲಿ ಸೀಟ್ ಬಿಡಲು ಯಾರು ಒಪ್ಪುವುದಿಲ್ಲ.
ಅಂತಹುದರಲ್ಲಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಲೆ ಕೆಟ್ಟವರಂತೆ, ಹುಚ್ಚು ಹುಚ್ಚಾಗಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಅಧಿಕಾರ ಕಳೆದುಕೊಂಡಾಗ ಇಂತಹ ಮಾತುಗಳನ್ನು ಆಡುವುದು ಸಹಜ. ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ.
ನಾನು ತಾಲ್ಲೂಕಿನ ಜನರ ಸೇವೆ ಮಾಡಲು ಬಂದಿದ್ದೇನೆ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ.
ಕ್ಷೇತ್ರದ ಜನರು ರಾಜಕೀಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ.ಈ ಬಗ್ಗೆ ಮುಂದಿನ ದಿನಗಳಲ್ಲಿ ನನ್ನ ಬೆಂಬಲಿಗರು ಹಾಗೂ ತಾಲ್ಲೂಕಿನ ಜನತೆಯ ಅಭಿಪ್ರಾಯ ಸಂಗ್ರಹಿಸಿ ನನ್ನ ತೀರ್ಮಾನ ಎಂದು ಸ್ಪಷ್ಟಪಡಿಸಿದರು.
ನಾನು ಮದ್ದೂರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸಿಟ್ಟುಕೊಂಡು ಬಂದಿದ್ದೇನೆಯೇ ಹೊರತು ಯಾರೊಂದಿಗೋ ಶಕ್ತಿ ಪ್ರದರ್ಶನ ಮಾಡಲು ಬಂದಿಲ್ಲ.
ಯಾರೋ ಒಬ್ಬರನ್ನು ಮೆಚ್ಚಿಸಲು ನಾನು ಈ ಕೆಲಸ ಮಾಡುತ್ತಿಲ್ಲ.ನನ್ನ ಕೆಲಸಗಳ ಬಗ್ಗೆ ಜನರು ಮಾತನಾಡಬೇಕು ಎಂದರು.
ನಾನು ಕಳೆದ ಹದಿನೈದು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿ ಪಡೆಯುತ್ತಿದ್ದೆ. ಆದರೆ ಕೆಲವು ಕಿಡಿಗೇಡಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡಲು ಮುಂದಾಗಿದ್ದರಿಂದ ನನ್ನ ಅಭಿಮಾನಿಗಳ ಒತ್ತಾಯದ ಮೇರೆಗೆ ಪತ್ರಿಕಾಗೋಷ್ಠಿ ನಡೆಸಿದ್ದೇನೆಂದು ತಿಳಿಸಿದರು.
ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್, ಕದಲೂರು ರವಿ, ತಿಮ್ಮೇಗೌಡ, ಯತೀಶ್, ಹರೀಶ್, ಚಂದ್ರು,ಶಿವು ಸೇರಿದಂತೆ ಇತರರು ಹಾಜರಿದ್ದರು.