ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸುಮಾರು 4 ಕೋಟಿ ರೂಪಾಯಿ ಸಾಗಿಸುತ್ತಿದ್ದ ಬಿಜೆಪಿ ಕಾರ್ಯಕರ್ತ ಸೇರಿದಂತೆ ಮೂವರನ್ನು ಶನಿವಾರ ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ ಬಂಧಿಸಲಾಗಿದೆ. 4 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ ಎಂದು ಚೆಂಗಲ್ಪಟ್ಟು ಡಿಇಒ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಹಾಗೂ ಖಾಸಗಿ ಹೋಟೆಲ್ ಮ್ಯಾನೇಜರ್ ಸತೀಶ್, ಆತನ ಸಹೋದರ ನವೀನ್ ಮತ್ತು ಒಬ್ಬ ಚಾಲಕ ಪೆರುಮಾಳ್ ಅನ್ನು ಬಂಧಿಸಲಾಗಿದೆ. ಒಟ್ಟು ಆರು ಬ್ಯಾಗ್ಗಳಲ್ಲಿ 4 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ. ಮೂವರು ಕೂಡಾ ರೈಲಿನಲ್ಲಿ ತಿರುನಲ್ವೇಲಿಗೆ ತೆರಳುತ್ತಿದ್ದಾಗ ಫ್ಲೈಯಿಂಗ್ ಸ್ಕ್ವಾಡ್ ಅವರನ್ನು ವಶಕ್ಕೆ ಪಡೆದಿದೆ.
ಮೂಲಗಳ ಪ್ರಕಾರ, ತಿರುನಲ್ವೇಲಿ ಬಿಜೆಪಿ ಸಂಸದ ನೈನಾರ್ ನಾಗೇಂತಿರನ್ ಅವರ ತಂಡದ ಸೂಚನೆಯಂತೆ ಈ ಹಣವನ್ನು ಸಾಗಿಸುತ್ತಿದ್ದೆ ಎಂದು ಬಿಜೆಪಿ ಕಾರ್ಯಕರ್ತ ಸತೀಶ್ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕ ತನಿಖೆ ನಡೆಸಲಾಗುತ್ತಿದೆ.
“ಚೆನ್ನೈನ ತಾಂಬರಂ ರೈಲು ನಿಲ್ದಾಣದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಶನಿವಾರ 4 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ. ವಶಪಡಿಸಿಕೊಂಡ ಮೊತ್ತವು 10 ಲಕ್ಷ ರೂಪಾಯಿಗಿಂತ ಅಧಿಕವಾಗಿರುವ ಕಾರಣ ಆದಾಯ ತೆರಿಗೆ ಇಲಾಖೆಯು ತನಿಖೆ ನಡೆಸಲಿದೆ” ಎಂದು ಚೆಂಗಲ್ಪಟ್ಟು ಡಿಇಒ ಹೇಳಿದರು.
“ಈ ಕಾರ್ಯಾಚರಣೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಲಾಗಿದೆ. ಇದರ ನಂತರ, ಆದಾಯ ತೆರಿಗೆ ಇಲಾಖೆ ಈ ವಿಷಯದ ಬಗ್ಗೆ ವಿವರವಾದ ತನಿಖೆ ನಡೆಸುತ್ತದೆ” ಎಂದು ಡಿಇಒ ತಿಳಿಸಿದರು.
39 ಲೋಕಸಭಾ ಸ್ಥಾನಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಏಪ್ರಿಲ್ 19 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.