ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದು ಇವರ ಗೆಲುವಿಗೆ ಎರಡು ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ದುಡಿಯಬೇಕು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಮುಖಂಡ ಬಿ.ಆರ್.ರಾಮಚಂದ್ರ ತಿಳಿಸಿದರು.
ಮಂಡ್ಯ ತಾಲೂಕಿನ ಹುಲಿವಾನ ಗ್ರಾಮದ ಅಮ್ಮ ರೈಸ್ಮಿಲ್ ಆವರಣದಲ್ಲಿ ನಡೆದ ಕೆರಗೋಡು ಹೋಬಳಿ ಹಾಗೂ ಹನಗನಹಳ್ಳಿ ಗೇಟ್ ಜಿನ್ನಾಗರದಮ್ಮ ದೇವಾಲಯದ ಆವರಣದಲ್ಲಿ ನಡೆದ ಬಸರಾಳು ಹೋಬಳಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ-ಜೆಡಿಎಸ್ ಮೈತ್ರಿ ಹಾಲು ಜೇನು ಇದ್ದ ರೀತಿ ಎರಡು ಪಕ್ಷದ ಕಾರ್ಯಕರ್ತರು ಅಣ್ಣ ತಮ್ಮಂದಿರ ರೀತಿ ಒಂದು ಕುಟುಂಬವಿದ್ದಂತೆ ಕುಮಾರಸ್ವಾಮಿಯವರ ಗೆಲುವಿಗೆ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಹೇಳಿದರು.
ಏ.4ಕ್ಕೆ ನಾಮಪತ್ರ ಸಲ್ಲಿಕೆ
ಸ್ಥಳೀಯರನ್ನು ಅಭ್ಯರ್ಥಿ ಮಾಡಬೇಕು ಎಂದು ಕುಮಾರಸ್ವಾಮಿ ನಿರ್ಧರಿಸಿದ್ದರು. ಆದರೆ ನಾಯಕರ ಒತ್ತಾಯದ ಮೇರೆಗೆ ಏ.4 ರಂದು ಬಿಜೆಪಿ-ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಹೆಚ್.ಡಿ. ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿ ನಂತರ ಬಹಿರಂಗ ಸಭೆ ಉದ್ದೇಶಿಸಿ ಎರಡು ಪಕ್ಷದ ನಾಯಕರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಬೂತ್ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಅವರ ಮನಸ್ಸನ್ನು ನೋಯಿಸಬಾರದು ಎಂದು ತಿಳಿಸಿದರು.
ಜೆಡಿಎಸ್ ಕಾಂಗ್ರೆಸ್ ಮೈತ್ರಿಯಿಂದ ಕುಮಾರಸ್ವಾಮಿಯವರಿಗೆ ಕೊಡಬಾರದ ಕಷ್ಟ ಕೊಟ್ಟು 14 ತಿಂಗಳಿಗೆ ತಮ್ಮ ಸರ್ಕಾರವನ್ನು ವಿಸರ್ಜಿಸಿ ಹೊರ ಬಂದರು. ಆದರಿಂದ ಹಳ್ಳಿಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಲು ಸಾಧ್ಯವಿದೆ ಎಂದರು.
ಮಂತ್ರಿ ಆಗುವುದು ಖಚಿತ
ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಎಸ್.ವಿಜಯಾನಂದ ಮಾತನಾಡಿ, ಮೂರನೇ ಬಾರಿಗೆ ನರೇಂದ್ರ ಮೋದಿಯವರು ದೇಶದ ಪ್ರಧಾನ ಮಂತ್ರಿ ಆಗುವ ಜೊತೆಗೆ ಕೇಂದ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮಂತ್ರಿ ಆಗುವುದು ಶತಸಿದ್ಧ ಎಂದು ತಿಳಿಸಿದರು.
ಈಗಾಗಲೇ ಬೆಂಗಳೂರು ಹಾಗೂ ಮಂಡ್ಯದಲ್ಲಿ ಸಮನ್ವಯ ಸಮಿತಿ ಸಭೆಗಳು ನಡೆದಿದ್ದು ಈಗ ಹೋಬಳಿ ಮಟ್ಟದಲ್ಲಿ ನೆಡೆಯುತ್ತಿದೆ ಎರಡು ಪಕ್ಷದ ಕಾರ್ಯಕರ್ತರು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಕುಮಾರಸ್ವಾಮಿ ಅವರನ್ನು ಹೆಚ್ಚು ಅಂತರದಿಂದ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮನ್ ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್, ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ,ತಿಮ್ಮೇಗೌಡ,ವಸಂತ್ ರಾಜ್, ಬಿಜೆಪಿ ಮುಖಂಡರಾದ ಅಶೋಕ್ ಜಯರಾಮ್, ಭೀಮೇಶ್, ಶಿವಕುಮಾರ್ ಆರಾಧ್ಯ,ಮನು, ಜೆಡಿಎಸ್ ಅಧ್ಯಕ್ಷ ಬೂದನೂರು ಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹೇಶ್, ಆನಂದ್, ಪುಟ್ಟಸ್ವಾಮಿ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.