ಪರಿಶಿಷ್ಟ ಜಾತಿಗಳ (ಎಸ್ಸಿ) ಉಪವರ್ಗೀಕರಣದ (ಒಳಮೀಓಸಲಾತಿ) ಕುರಿತು ಸುಪ್ರೀಂ ಕೋರ್ಟ್ನ ಇತ್ತೀಚಿನ ತೀರ್ಪನ್ನು ಪ್ರತಿಭಟಿಸಿ ಕೆಲವು ದಲಿತ ಮತ್ತು ಆದಿವಾಸಿ ಸಂಘಟನೆಗಳು ಕರೆ ಕೊಟ್ಟಿರುವ ಬುಧವಾರದ ಭಾರತ್ ಬಂದ್ಗೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಬೆಂಬಲ ಘೋಷಿಸಿದೆ.
ಮೀಸಲಾತಿಯನ್ನು ರದ್ದುಗೊಳಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಈ ಪಕ್ಷಗಳು ಮತ್ತು ಇತರರು ಮೀಸಲಾತಿಯ ಅಗತ್ಯವನ್ನು ಅರ್ಥಮಾಡಿಕೊಳ್ಳಬೇಕು. ಮೀಸಲಾತಿಯ ವಿಚಾರದಲ್ಲಿ ಆಟವಾಡಬಾರದು ಎಂದು ಬಿಎಸ್ಪಿ ಹೇಳಿದೆ.
ಎಸ್ಸಿ/ಎಸ್ಟಿ ಸಮುದಾಯಗಳಲ್ಲಿ ಒಳಮೀಸಲಾತಿಗೆ ಅವಕಾಶ ನೀಡಿರುವ ಸುಪ್ರೀಂ ಕೋರ್ಟ್, ಒಳಮೀಸಲಾತಿಯಲ್ಲಿ ಕ್ರೀಮಿ ಲೇಯರ್ ಅಳವಡಿಸಿಕೊಳ್ಳಬೇಕೆಂದು ಆಗಸ್ಟ್ 1ರಂದು ನೀಡಿದ ತನ್ನ ತೀರ್ಪಿನಲ್ಲಿ ಹೇಳಿದೆ. ‘ಕ್ರೀಮಿ ಲೇಯರ್’ ಅಳವಡಿಕೆ ಬಗ್ಗೆ ಅಸಮಾಧಾನ ಹೊಂದಿರುವ 21 ಸಂಘಟನೆಗಳು ಆಗಸ್ಟ್ 21ರಂದು ‘ಭಾರತ್ ಬಂದ್’ಗೆ ಕರೆ ಕೊಟ್ಟಿವೆ. ಬಂದ್ಅನ್ನು ಬಿಎಸ್ಪಿ ಬೆಂಬಲಿಸಿದೆ. “ಬಿಜೆಪಿ ಮತ್ತು ಕಾಂಗ್ರೆಸ್ನಂತಹ ಪಕ್ಷಗಳ ಮೀಸಲಾತಿ ವಿರುದ್ಧದ ಪಿತೂರಿಯಿಂದ ಎಸ್ಸಿ/ಎಸ್ಟಿ ಸಮುದಾಯಗಳ ಉಪವರ್ಗೀಕರಣದಲ್ಲಿ ‘ಕ್ರೀಮಿ ಲೇಯರ್’ ಅಳವಡಿಕೆಯನ್ನು ಒಪ್ಪಿಕೊಳ್ಳುತ್ತಿವೆ” ಎಂದು ಹೇಳಿದೆ.
ಮೀಸಲಾತಿಯನ್ನು ನಿಷ್ಪರಿಣಾಮಕಾರಿಯಾಗಿ ಮಾಡಿ ಮತ್ತು ಅಂತಿಮವಾಗಿ ಕೊನೆಗೊಳಿಸುವುದು ಆ ಪಕ್ಷಗಳ ಉದ್ದೇಶವಾಗಿದೆ” ಎಂದು ಬಿಎಸ್ಪಿ ವರಿಷ್ಠೆ ಮಾಯಾವತಿ ಆರೋಪಿಸಿದ್ದಾರೆ.
“ಕ್ರೀಮಿ ಲೇಯರ್ ಅಳವಡಿಸದಂತೆ ಭಾರತ್ ಬಂದ್ನ ಅಂಗವಾಗಿ ಸರ್ಕಾರಕ್ಕೆ ಪ್ರತಿಭಟನಾಕಾರರು ಹಕ್ಕೊತ್ತಾಯ ಪತ್ರವನ್ನು ಸಲ್ಲಿಸಲಿದ್ದಾರೆ. ಸಂವಿಧಾನ ತಿದ್ದುಪಡಿಯ ಮೂಲಕ ಮೀಸಲಾತಿಯಲ್ಲಿ ಮಾಡಲಾದ ಬದಲಾವಣೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತಾರೆ” ಎಂದು ಅವರು ಹೇಳಿದ್ದಾರೆ.
“ಎಸ್ಸಿ ಮತ್ತು ಎಸ್ಟಿಗಳ ಜೊತೆಗೆ ಒಬಿಸಿ ಸಮುದಾಯಕ್ಕೆ ನೀಡಿರುವ ಮೀಸಲಾತಿಯ ಸಾಂವಿಧಾನಿಕ ಹಕ್ಕು ಬಿ.ಆರ್ ಅಂಬೇಡ್ಕರ್ ಅವರ ನಿರಂತರ ಹೋರಾಟದ ಫಲವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮೀಸಲಾತಿಯ ಅಗತ್ಯತೆ ಮತ್ತು ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.