ಮದ್ದೂರಿನ ನಳಂದ ವಿದ್ಯಾಪೀಠ ಟ್ರಸ್ಟ್ ಶಾಲೆಯಲ್ಲಿ ಕೆಲಸ ನಿರ್ವಹಿಸಿರುವ ತಮಗೆ ಪಿಎಫ್ ಸೌಲಭ್ಯ ಕಲ್ಪಿಸದೆ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ಶಾಸಕರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ 15 ದಿನಗಳಲ್ಲಿ ನಮ್ಮ ಪಿಎಫ್ ಖಾತೆಗೆ ಹಣ ಹಾಕದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲೆಯ ಮಾಜಿ ಸಿಬ್ಬಂದಿ ಎಚ್ಚರಿಸಿದ್ದಾರೆ.
ಮದ್ದೂರಿನ ನಳಂದ ವಿದ್ಯಾಪೀಠ ಟ್ರಸ್ಟ್ ಶಾಲೆ ಮಾಜಿ ನೌಕರರಾದ ಎನ್.ಪಿ.ಸೌಮ್ಯ, ಎಂ.ಎಸ್.ನಂದಿನಿ ಅವರು, ಪಿಎಫ್ ಸೌಲಭ್ಯ ಕೇಳಿದ ಕಾರಣಕ್ಕಾಗಿ ತಮ್ಮನ್ನೆಲ್ಲ ಕೆಲಸದಿಂದ ತೆಗೆದು ಹಾಕಲಾಗಿದೆ. ಕೆಲವರು ಬೇಸತ್ತು ಕೆಲಸ ಬಿಟ್ಟಿದ್ದಾರೆ. ಆದರೆ, 2019ರಿಂದ 2022ರವರೆಗೆ ತಮ್ಮ ಪಿಎಫ್ ಖಾತೆಗೆ ಹಾಕಬೇಕಿರುವ ಹಣವನ್ನು ಹಾಕಬೇಕೆಂಬುದು ತಮ್ಮ ಪ್ರಮುಖ ಬೇಡಿಕೆಯಾಗಿದೆ. ಇದನ್ನು ಈಡೇರಿಸಲು ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕೆಂದರು.
ಶಾಲೆಯ ನಾನಾ ಹುದ್ದೆಗಳಲ್ಲಿ ಹಲವಾರು ವರ್ಷಗಳಿಂದ ನಾವು ಕೆಲಸ ಮಾಡಿದ್ದೇವೆ. ಕೆಲವರು 5 ವರ್ಷ, ಉಳಿದವರು 10 ವರ್ಷಕ್ಕೂ ಹೆಚ್ಚು ಕಾಲ ಕೆಲಸ ಮಾಡಿ, ಈಗ ಶಾಲೆಯ ಕೆಲಸ ಬಿಟ್ಟಿದ್ದೇವೆ. 2016ರಲ್ಲಿ ತಮಗೆ ಮೊದಲು ಪಿಎಫ್ ಸೌಲಭ್ಯ ಕಲ್ಪಿಸಲಾಗಿತ್ತು. ಅದರಂತೆ 2019ರವರೆಗೆ ಪಿಎಫ್ ಸೌಲಭ್ಯ ಮುಂದುವರೆಸಲಾಗಿತ್ತು. ಈ ಅವಧಿಯಲ್ಲೂ 11 ತಿಂಗಳು ಪಿಎಫ್ ಮೊತ್ತವನ್ನು ತಮ್ಮ ಖಾತೆಗೆ ಹಾಕಿಲ್ಲ ಎಂದು ದೂರಿದರು.
ಪ್ರಸ್ತುತ ಸಂಸ್ಥೆಯ ಆಡಳಿತ ಮಂಡಳಿಯವರ ನಡುವಿನ ಬಿನ್ನಾಭಿಪ್ರಾಯದಿಂದಾಗಿ 2019ರಿಂದ 2022ರವರೆವಿಗೆ ಬಹುತೇಕ ನೌಕರರಿಗೆ ಒಂದು ತಿಂಗಳು ಸಹ ಪಿಎಫ್ ಖಾತೆಗೆ ಹಣ ಹಾಕಿಲ್ಲ. ಈ ಬಗ್ಗೆ ಸಂಸ್ಥೆಯ ಅಧ್ಯಕ್ಷ, ಖಜಾಂಚಿ, ಕಾರ್ಯದರ್ಶಿ ಸೇರಿದಂತೆ ಶಾಸಕ ಕೆ.ಎಂ.ಉದಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ್ದೇವೆ, ಆದರೂ ಪಿಎಫ್ ಹಣ ನೀಡಿಲ್ಲ ಎಂದರು.
ಗೋಷ್ಠಿಯಲ್ಲಿ ಶಾಲೆಯ ಮಾಜಿ ಸಿಬ್ಬಂದಿಗಳಾದ ವಿಜಯಮ್ಮ, ಅಪ್ಪಾಜಯ್ಯ, ಸರೋಜ, ಪ್ರತಾಪ್, ಚನ್ನೇಗೌಡ, ಜ್ಯೋತಿ ಇತರರು ಹಾಜರಿದ್ದರು.