ಮಂಡ್ಯನಗರದ ಅಂಬೇಡ್ಕರ್ ಭವನದಲ್ಲಿ ಡಿ.6ರಂದು “ಕಾವೇರಿ: ಪ್ರಕೃತಿಯ ಪ್ರಸಾದ ಮಾನವನ ವಿವಾದ” ಎಂಬ ಶೀರ್ಷಿಕೆಯಡಿಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಎಸ್.ಬಿ ಏಜುಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭ ಉದ್ಘಾಟನೆಯನ್ನು ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಸಿ. ಚಂದ್ರಶೇಖರ್ ಮಾಡುವರು. ಅಧ್ಯಕ್ಷತೆಯನ್ನು ರಾಜ್ಯಮಾಲಿನ್ಯ ನಿಯಂತ್ರಣ ಮಂಡಲಿಯ ಮಾಜಿ ಅಧ್ಯಕ್ಷ ಪ್ರೊ. ಬಿ.ಶಿವಲಿಂಗಯ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಭಾಗವಹಿಸುವರು ಎಂದರು.
ಪ್ರಾಸ್ತಾವಿಕ ನುಡಿಗಳನ್ನು ವಾಗ್ನಿ ಪ್ರೊ. ಎಂ. ಕೃಷ್ಣಗೌಡ ನುಡಿಯುವರು. ಸಂಪನ್ಮೂಲ ವ್ಯಕ್ತಿಗಳಾಗಿ ಕ್ಯಾಪ್ಟನ್ ರಾಜಾರಾವ್, ಡಾ.ಚಂದ್ರಶೇಖರ್, ಡಾ. ಎಸ್. ರಾಜೇಂದ್ರ ಪ್ರಸಾದ್, ಅರ್ಜುನಹಳ್ಳಿ ಪ್ರಸನ್ನಕುಮಾರ್, ಹೋರಾಟಗಾರ್ತಿ ಸುನಂದಾ ಜಯರಾಂ, ಪ್ರೊ. ಕೆ.ಸಿ.ಬಸವರಾಜು, ಡಾ.ಪಿ.ಎಸ್. ರಾವ್, ರವಿಶಂಕರ್ ದೋಂತಿ, ಪುಷ್ಪ ತುಪ್ಪದ್, ಶ್ಯಾಮ್ ಪ್ರಸಾದ್ ಹಾಗೂ ಪ್ರೊ. ಜಗದೀಶ ಗೋಡಿಹಾಳ ಅವರು ವಿವಿಧ ವಿಷಯಗಳ ಬಗ್ಗೆ ವಿಷಯ ಮಂಡನೆ ಮಾಡುವರು ಎಂದರು.
ಈ ವಿಚಾರ ಸಂಕಿರಣದಲ್ಲಿ ನಡೆಯುವ ತಜ್ಞರ ಸಮಾಲೋಚನೆಗಳು ಹಾಗೂ ಮಾರ್ಗದರ್ಶನಗಳಿಂದ ಸಾರ್ವಜನಿಕರಿಗೆ ನೀರಿನ ಸದ್ಬಳಕೆ, ಮಹತ್ವ, ಶೇಖರಣೆ, ಮರುಬಳಕೆ, ಉಪಯೋಗ ಹಾಗೂ ಬೇಸಾಯದಲ್ಲಿನ ವೈಜ್ಞಾನಿಕ ಪದ್ಧತಿಯ ಅಳವಡಿಕೆ, ಹೊಸತಳಿಗಳಿಂದ ಕೂಡಿದ ಭಿತ್ತನೆ ಬೀಜಗಳ ವ್ಯವಸಾಯದ ಬಗ್ಗೆ ಅರಿವು ಮೂಡಿಸಲಾಗುವುದು, ನುರಿತ ತಜ್ಞರಿಂದ ಕೂಡಿದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡುವುದರ ಮೂಲಕ ಕೃಷಿ ಕ್ಷೇತ್ರವನ್ನು ವಿಸ್ತರಿಸಿ ಮತ್ತೊಂದು “ಹಸಿರು ಕ್ರಾಂತಿ” ಉಂಟಾಗುವಂತೆ ಮಾಡಿದಲ್ಲಿ ಕಾವೇರಿ ಕಣಿವೆಯ ಸರ್ವತೋಮುಖ ಅಭಿವೃದ್ಧಿಯಾಗುವುದರಲ್ಲಿ ಹಾಗೂ ಕಾವೇರಿ ಜಲವಿವಾದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಸಿ.ಜಯರಾಂ, ಡಾ.ರಾಮಲಿಂಗಯ್ಯ ಹಾಗೂ ಎಂ.ಆರ್.ಮಂಜು ಉಪಸ್ಥಿತರಿದ್ದರು.