Thursday, May 16, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣ| ಆರೋಪಿ ರಕ್ಷಣೆಗೆ ಪೊಲೀಸರ ಯತ್ನ; ಪ್ರಗತಿಪರರಿಂದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ

ಹಾಸನದ ಪ್ರಜ್ವಲ್ ರೇವಣ್ಣ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳೆ ನರಸೀಪುರ ಪೊಲೀಸರು ಆರೋಪಿಯ ರಕ್ಷಣೆಗೆ ನಿಂತಿದ್ದು, ದುರ್ಬಲ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ಹಲವು ಪ್ರಗತಿಪರ ಸಂಘಟನೆಗಳ ಮುಖಂಡರು, ಅತ್ಯಾಚಾರ ಸೆಕ್ಷನ್ ನಡಿ ಎಫ್ಐಆರ್ ದಾಖಲಿಸುವಂತೆ ರಾಜ್ಯ  ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಏ.28ರಂದು 47 ವರ್ಷದ ಸಂತ್ರಸ್ತ ಮಹಿಳೆ ಹೊಳೆನರಸೀಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದರಿ ದೂರನ್ನು ಪಡೆದುಕೊಂಡಿರುವ ಹೊಳೆನರಸೀಪುರ ಪೊಲೀಸರು ಅಪರಾಧ ಸಂಖ್ಯೆ 107/2024 ಎಂದು ದಾಖಲಿಸಿಕೊಂಡು ದುರ್ಬಲವಾಧ ಐಪಿಸಿ ಸೆಕ್ಷನ್ 354a, 354d, 506, 509 ದಾಖಲಿಸಿಕೊಂಡಿದ್ದಾರೆಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಮೀನಾಕ್ಷಿ ಬಾಳಿ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಬೀಹಾ ಭೂಮಿಗೌಡ, ಜನವಾದಿ ಮಹಿಳಾ ಸಂಘಟನೆಯ ಸತ್ಯಾ, ಡಿವೈಎಫ್ಐ ರಾಜ್ಯ ಅಧ್ಯಕ್ಷ
ಮುನೀರ್ ಕಾಟಿಪಳ್ಳ, ಜನವಾದಿ ಮಹಿಳಾ ಸಂಘಟನೆಯ ಉಪಾಧ್ಯಕ್ಷರಾದ ಕೆ ನೀಲಾ ಸೇರಿದಂತೆ ಹಲವು ಆಗ್ರಹಿಸಿದ್ದಾರೆ.

ಸಂತ್ರಸ್ತ ಮಹಿಳೆ ನೀಡಿರುವ ದೂರು ಮತ್ತು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ಸಾರಾಂಶದಲ್ಲಿ “ಪಿರ್ಯಾದಿಗೆ ಒಬ್ಬಳು ಹೆಣ್ಣು ಮಗಳಿರುತ್ತಾಳೆ. ಎಚ್ ಡಿ ರೇವಣ್ಣರವರ ಮನೆಯಲ್ಲಿ ಮೂರುವರೆ ವರ್ಷಗಳ ಕಾಲ ಕೆಲಸ ಮಾಡಿಕೊಂಡಿದ್ದು ಅವರ ಮನೆಗೆ ಕೆಲಸಕ್ಕೆ ಸೇರಿಕೊಂಡ 4 ತಿಂಗಳ ನಂತರ ಹೆಚ್ ಡಿ ರೇವಣ್ಣ ರವರು ತಮ್ಮ ಕೊಠಡಿಗೆ ಬರುವಂತೆ ಅಹ್ವಾನಿಸುತ್ತಿದ್ದರು. ಮನೆಯಲ್ಲಿ 6 ಜನ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಎಲ್ಲರು ಪ್ರಜ್ವಲ್ ರೇವಣ್ಣ ಬಂದಾಗ ನಮಗೆ ಭಯವಾಗುತ್ತದೆ ಎಂದು ಭಯ ಹೊರ ಹಾಕುತ್ತಿದ್ದರು. ರೇವಣ್ಣರವರು ತಮ್ಮ ಪತ್ನಿ ಭವಾನಿಯವರು ಮನೆಯಲ್ಲಿ ಇಲ್ಲದಿದ್ದ ಸಮಯದಲ್ಲಿ ಸ್ಟೋರ್ ರೂಮ್ ನಲ್ಲಿ ಕೈ ಹಿಡಿದು ಎಳೆಯುತ್ತಿದ್ದರು. ಹಣ್ಣು ಕೊಡುವ ನೆಪದಲ್ಲಿ ಮೈ ಮುಟ್ಟುತ್ತಿದ್ದರು. ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು. ಪ್ರಜ್ವಲ್ ರೇವಣ್ಣ ಅಡುಗೆ ಮನೆಯಲ್ಲಿ ಇದ್ದಾಗ ಹಿಂದಿನಿಂದ ಬಂದು ಮೈ ಮುಟ್ಟುತ್ತಾ ಹೊಟ್ಟೆ ಭಾಗದಲ್ಲಿ, ಜಿಗುಟುತ್ತಿದ್ದರು. ಎಣ್ಣೆ ಹಚ್ಚಲು ಶೋಭಾ ರವರನ್ನು ಕಳಿಸು ಎಂದು ಕೆಲಸ ಮಾಡುವ ಹುಡುಗನ ಹೇಳಿ ಕಳುಹಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಹಲವಾರು ಬಾರಿ ಲೈಂಗಿಕ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಮನೆಯಲ್ಲಿದ್ದಾಗ ಪೋನ್ ಮಾಡಿ ಮನೆಯಲ್ಲಿ ಮಗಳು ಇರುತ್ತಿದ್ದು ಸುಮಾರು ಸಲ ವಿಡಿಯೋ ಕಾಲ್ ಮಾಡಿ ಪಿರ್ಯಾದಿ ಮಗಳ ಜೊತೆಯೂ ಅಸಭ್ಯ ಸಂಬಾಷಣೆ ಮೂಲಕ ಪ್ರಚೋದಿಸಲು ಯತ್ನಿಸುತ್ತಿದ್ದು, ಮಗಳು ಹೆದರಿಕೊಂಡು ನಂಬರ್ ಬ್ಲಾಕ್ ಮಾಡಿದ್ದು, ಇದರಿಂದ ಪಿರ್ಯಾದಿಯವರು ಮನೆಯಿಂದ ಕೆಲಸ ಬಿಟ್ಟು ಹೊರ ಬಂದಿದ್ದರು” ಎಂದು ಎಫ್ಐಆರ್ ಸಾರಾಂಶದಲ್ಲಿ ದಾಖಲಿಸಿಕೊಂಡಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಪ್ರಗತಿಪರ ಸಂಘಟನೆಗಳ ಮುಖಂಡರ ಬೇಡಿಕೆಗಳು

1. ದೂರುದಾರ ಸಂತ್ರಸ್ತ ಮಹಿಳೆಯರ ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಮಹಿಳಾ ಆಪ್ತಸಮಾಲೋಚಕರು ಇರಬೇಕು.

2. ಅತ್ಯಾಚಾರದ ಸ್ಪಷ್ಟ ಸಂಕೇತಗಳು ಇದ್ದರೂ ದುರ್ಬಲ ಸೆಕ್ಷನ್ ಗಳಡಿಯಲ್ಲಿ ಎಫ್ಐಆರ್ ದಾಖಲಿಸಿದ ಹೊಳೆನರಸೀಪುರದ ಇನ್ಸ್ ಪೆಕ್ಟರ್ ಅನ್ನು ಅಮಾನತ್ತು ಮಾಡಬೇಕು.


3. ದೂರುದಾರ ಸಂತ್ರಸ್ತ ಮಹಿಳೆಯರಿಗೆ ಭದ್ರತೆ ಒದಗಿಸಬೇಕು.


4. ವಿಡಿಯೋದಲ್ಲಿರುವ ಮಹಿಳೆಯರನ್ನು ಪೊಲೀಸರೇ ಪತ್ತೆ ಹಚ್ಚಿ ಹೇಳಿಕೆ ದಾಖಲಿಸಬೇಕು.


5. ಈಗಾಗಲೇ ದೂರು ದಾಖಲಿಸಿರುವ ಮಹಿಳೆಯ ಮರು ಹೇಳಿಕೆ ತೆಗೆದುಕೊಳ್ಳಬೇಕು.

6. FIR 107/2024 ನಲ್ಲಿ ಇಬ್ಬರು ಸಂತ್ರಸ್ತರಿದ್ದರೂ ಸಂತ್ರಸ್ತರ ಕಾಲಂನಲ್ಲಿ ಹಾಕದೇ ಇರುವ ಪೊಲೀಸರ ಮೇಲೆ ಕ್ರಮ ತೆಗೆದುಕೊಳ್ಳಬೇಕು.

7. ಈಗಾಗಲೇ ದಾಖಲಿಸಿರುವ ಎಫ್ಐಆರ್ ಗೆ ಹೆಚ್ಚುವರಿ ಅಂಶಗಳನ್ನು, ಸೆಕ್ಷನ್ ಗಳನ್ನು ಸೇರ್ಪಡೆಗೊಳಿಸಿ ಬಲಗೊಳಿಸಬೇಕು

8. ಆರೋಪಿ ಕುಟುಂಬದ ಜೊತೆ ನಿಕಟ ಸಂಪರ್ಕ ಹೊಂದಿರುವ ಪೊಲೀಸರನ್ನು ವರ್ಗಾಹಿಸಬೇಕು.

9. ಆರೋಪಿಯ ಕುಟುಂಬದ ಯಾವುದೇ ವ್ಯಕ್ತಿಯ ಶಿಫಾರಸ್ಸು ಪತ್ರದ ಮೇರೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳನ್ನು ಹಾಸನದಿಂದ ವರ್ಗಾಯಿಸಬೇಕು.

10. ತನ್ನ ಪ್ರಭಾವವನ್ನೆ ಅಸ್ತ್ರವನ್ನಾಗಿಸಿಕೊಂಡು ನೂರಾರು ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಅತಿ ಘೋರ ಪ್ರಕರಣ ಇದಾಗಿರುವುದರಿಂದ ಈ ಪ್ರಕರಣವನ್ನು ನಿಷ್ಪಕ್ಷಪಾತ, ನಿರ್ಭೀತಿಯಿಂದ ತನಿಖೆ ನಡೆಸಲಾಗುತ್ತದೆ ಎಂದು ಖಾತ್ರಿಗೊಳಿಸಬೇಕು.

ಪೊಲೀಸರೇ ದಾಖಲಿಕೊಂಡಿರುವ ಎಫ್ಐಅರ್ ಸಾರಾಂಶದ ಪ್ರಕಾರ ಈ ಪ್ರಕರಣ ಅತ್ಯಾಚಾರದ ಪ್ರಕರಣ ಆಗಿರುತ್ತದೆ. ಹಾಗಾಗಿ ಲೈಂಗಿಕ ದೌರ್ಜನ್ಯಗಳನ್ನು ವಿವರಿಸಿರುವ ಪ್ರಕರಣಗಳಲ್ಲಿ ರೇಪ್ ಗೆ ಸಂಬಂಧಪಟ್ಟ ಹಲವು ಸೆಕ್ಷನ್ ಗಳನ್ನು ದಾಖಲಿಸಿಕೊಳ್ಳಬೇಕಿತ್ತು. “ಸೀರೆಯ ಪಿನ್ ಕಿತ್ತು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು” ಎಂಬ ಆರೋಪವು ಅತ್ಯಾಚಾರವನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಭರವಸೆಗಳನ್ನು ನೀಡಿ, ಅಮಿಷವೊಡ್ಡಿ ಒಪ್ಪಿತ ಲೈಂಗಿಕ ಚಟುವಟಿಕೆ ಮಾಡುವುದು ಕೂಡಾ ಅತ್ಯಾಚಾರ ಎಂದು ಪರಿಗಣಿತವಾಗಿದೆ. ಕೆಲ ವಿಡಿಯೊಗಳಲ್ಲಿ ಒಪ್ಪಿತ ಲೈಂಗಿಕ ಚಟುವಟಿಕೆ ಎಂದು ಕಂಡು ಬಂದರೆ ಇನ್ನು ಕೆಲ ವಿಡಿಯೋಗಳಲ್ಲಿ ಮಹಿಳೆಯರು ಪ್ರತಿರೋಧ ಮಾಡಿದರೂ ಲೈಂಗಿಕ ಕ್ರೀಯೆ ನಡೆಸಲಾಗಿದೆ‌. ಹಾಗಾಗಿ ಆರೋಪಿಯೇ ಚಿತ್ರಿಕರಿಸಿರುವ ನೂರಾರು ವಿಡಿಯೋಗಳಲ್ಲಿ ಅತ್ಯಾಚಾರ ಮಾಡಿರುವುದು ಸ್ಪಷ್ಟವಾಗಿದೆ‌. ಇವೆಲ್ಲವನ್ನೂ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಜತೆಗೇ ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಮಹಿಳೆ ನೀಡಿರುವ ದೂರಿನ ಎಫ್ಐಆರ್ ಸಾರಾಂಶದಲ್ಲಿ, ಮಹಿಳೆಯ ಇಚ್ಚೆಗೆ ವಿರುದ್ದವಾಗಿ ಮಹಿಳೆಯ ಮೈ ಮುಟ್ಟಿರುವುದಲ್ಲದೇ, ದೌರ್ಜನ್ಯವನ್ನು ಮುಂದುವರೆಸಿದ್ದರು ಎಂದು ಹೇಳಲಾಗಿದೆ. ಮಾತ್ರವಲ್ಲದೇ ಸಂತ್ರಸ್ತ ಮಹಿಳೆಯ ಮಗಳಿಗೂ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ಸಂತ್ರಸ್ತ ಮಹಿಳೆ ಹೇಳಿಕೊಂಡಿದ್ದಾರೆ. ಆದರೆ ಎಫ್ಐಆರ್ ನ ಸಂತ್ರಸ್ತರ ಕಾಲಂನಲ್ಲಿ ಒರ್ವ ಸಂತ್ರಸ್ತರ ಹೆಸರು ಮಾತ್ರ ಉಲ್ಲೇಖಿಸಲಾಗಿದೆ. ಇಬ್ಬರು ಸಂತ್ರಸ್ತರು ಎಂಬುದನ್ನು ದಾಖಲಿಸದೇ ಎಫ್ಐಆರ್ ಅನ್ನು ಸರಳೀಕರಿಸಿ ಆರೋಪಿ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ಗೆ ಪೊಲೀಸರು ಸಹಕಾರ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಹಾಲಿ ಸಂಸದರಾಗಿದ್ದು, ಎಚ್ ಡಿ ರೇವಣ್ಣ ಹಲವು ಭಾರಿ ಪ್ರಭಾವಿ ಸಚಿವರಾಗಿದ್ದವರು. ಇಡೀ ಕುಟುಂಬ ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬವಾಗಿದ್ದು, ಅವರನ್ನು ರಕ್ಷಣೆ ಮಾಡಲೆಂದೇ ಪೊಲೀಸರು ದುರ್ಬಲ ಸೆಕ್ಷನ್ ಗಳನ್ನು ದಾಖಲಿಸಿದ್ದಾರೆ ಮತ್ತು ರೇಪ್ ಸೆಕ್ಷನ್ ಗಳನ್ನು ಕೈಬಿಟ್ಟಿದ್ದಾರೆ. ಹಾಗಾಗಿ ಹೊಳೆನರಸೀಪುರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಸೇರಿದಂತೆ ಈ ಎಫ್ಐಆರ್ ಗೆ ಸಂಬಂಧಿಸಿದ ಎಲ್ಲಾ ಪೊಲೀಸರನ್ನು ಅಮಾನತ್ತು ಮಾಡಿ, ಪ್ರಾಮಾಣಿಕ ಅಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸುವಂತೆ ಆಗ್ರಹಿಸಿ ಅವರು ದೂರು ನೀಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!