ಪ್ರಸ್ತುತ ಉಂಟಾಗಿರುವ ಕಾವೇರಿ ಸಂಕಷ್ಟದ ನಡುವೆಯೇ ಕಾವೇರಿ ಉಳಿವಿಗಾಗಿ ರಾಜ್ಯ ಸರ್ಕಾರವು ಕಾನೂನು ಹೋರಾಟ ಮುಂದುವರೆಸಲಿದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮದ್ದೂರು ಪಟ್ಟಣದ ತಾಲೂಕು ಕಚೇರಿಯಲ್ಲಿ ನವೀಕರಣಗೊಂಡ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕಾವೇರಿ ನೀರಿನ ವಿಷಯ ಬಹಳ ಹಿಂದಿನ ಅತ್ಯಂತ ಹಳೇಯದ್ದಾಗಿದೆ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸರ್ಕಾರಗಳು ಈ ವಿಷಯವಾಗಿ ಸಮಸ್ಯೆಗಳನ್ನು ಎದುರಿಸಿವೆ. ಪ್ರಸ್ತುತ ಎದುರಾಗಿರುವ ಕಾವೇರಿ ಸಮಸ್ಯೆ ಬಗ್ಗೆ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ. ಸರ್ವ ಪಕ್ಷದ ಸಭೆ ಮಾಡುವ ಮೂಲಕ ಕಾವೇರಿ ನೀರನ್ನು ಸಮಸ್ಯೆ ಬಗೆಹರಿಸುವ ಬಗ್ಗೆ ಗಮನ ಹರಿಸಿದ್ದೇವೆ ಎಂದರು.
ಬೆಳೆಗೆ ಪರಿಹಾರ
ರಾಜ್ಯದಲ್ಲಿ ಬರ ಪೀಡಿತ ತಾಲ್ಲೂಕುಗಳನ್ನು ಘೋಷಣೆ ಮಾಡಿದ ನಂತರ ಬೆಳೆಗಳಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗುವುದು, ದೀರ್ಘಾವಧಿ ಬೆಳೆಗೂ ಕೂಡ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಚಿಂತಿಸಲಾಗುತ್ತಿದೆ ಎಂದರು.
ಶಾಸಕ ಕದಲೂರು ಉದಯ್ ಮಾತನಾಡಿ, ಹಲವಾರು ಸಮಸ್ಯೆಗಳನ್ನು ಈ ಕ್ಷೇತ್ರದ ಜನತೆ ಅನುಭವಿಸುತ್ತಿದ್ದಾರೆ, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತಾಲೂಕು ಕಚೇರಿಯಲ್ಲೇ ಶಾಸಕರ ಕಚೇರಿಯನ್ನು ತೆರೆದಿದ್ದೇನೆ ಎಂದರು.
ವಾರದಲ್ಲಿ ಎರಡು ದಿನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡಲಾಗುವುದು, ಈಗಾಗಲೇ ಬಹುತೇಕ ಎಲ್ಲಾ ಇಲಾಖೆಗಳಲ್ಲೂ ಹೊಸ ಅಧಿಕಾರಿಗಳು ಬಂದಿದ್ದಾರೆ, ಮುಂದಿನ ದಿನಗಳಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ ಎಂದರು.
ಸಚಿವ ಚಲುವರಾಯಸ್ವಾಮಿ ಅವರನ್ನು ಮದ್ದೂರು ತಾಲೂಕಿನ ಗಡಿಭಾಗ ನಿಡಘಟ್ಟದಿಂದ ಬೈಕ್ ರ್ಯಾಲಿಯಲ್ಲಿ ಕರೆ ತರಲಾಯಿತು. ರ್ಯಾಲಿಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.