ಬರ ಪರಿಹಾರ ಕುರಿತು ಕೇಂದ್ರ ಹಾಣಕಾಸು ಸಚಿವರೊಂದಿಗೆ ಚರ್ಚಿಸಲು ನ.23 ರಂದು ತಾವು ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ದೆಹಲಿಗೆ ತೆರಳುತ್ತಿರುವುದಾಗಿ ಕೃಷಿ ಸಚಿವ ಎನ್ .ಚಲುವರಾಯಸ್ವಾಮಿ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಚಿತ್ರದುರ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
223 ತಾಲ್ಲೂಕುಗಳಲ್ಲಿ ಬರ
ರಾಜ್ಯದ 223 ತಾಲ್ಲೂಕುಗಳಲ್ಲಿ ಬರ ಘೋಷಣೆಯಾಗಿದೆ 18,000 ಕೋಟಿಗೂ ಅಧಿಕ ಪರಿಹಾರ ಕೋರಲಾಗಿದೆ ರಾಜ್ಯದ ನಿರಂತರ ಮನವಿಗಳ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಭೇಟಿಗೆ ಸಮಯ ನಿಗಧಿ ಪಡಿಸಿದ್ದು ತಾವು ಸಚಿವರಾದ ಕೃಷ್ಣಾ ಭೈರೇಗೌಡ ಮತ್ತು ಪ್ರಿಯಾಂಕಾ ಖರ್ಗೆ ದೆಹಲಿಗೆ ತೆರಳುತ್ತಿರುವುದಾಗಿ ತಿಳಿಸಿದರು.
ಈ ವರ್ಷ ಕೃಷಿ ಭಾಗ್ಯ ಮರು ಜಾರಿ ಗೊಳಿಸಿದ್ದು 200 ಕೋಟಿ ರೂ ವೆಚ್ಚದಲ್ಲಿ 30000 ಕ್ಕೂ ಅಧಿಕ ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು ಇದಕ್ಕೆ ಕ್ಯಾಬಿನೆಟ್ ಅನುಮೋದನೆ ಪಡೆಯಲಾಗಿದೆ ಎಂದು
ಮಾಹಿತಿ ನೀಡಿದರು.
ಇದೇ ವೇಳೆ ಬೆಳೆ ಸಮೀಕ್ಷೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ. ಲೋಪ ಎಸಗಿದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಬೆಳೆ ಸಮೀಕ್ಷೆ ವೇಳೆ ಅಧಿಕಾರಿಗಳ ನಿರ್ಲಕ್ಷ್ಯ, ಲೋಪಗಳ ಬಗ್ಗೆ ಜನಪ್ರತಿಧಿಗಳು, ರೈತರು ದೂರು ಸಲ್ಲಿಸಿದ್ದಾರೆ. ರೈತರ ಹಿತ ಇಲಾಖೆ ಹಾಗೂ ಅಧಿಕಾರಿಗಳ ಮೊದಲ ಆದ್ಯತೆ. ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಚಿವರ ಮೆಚ್ಚುಗೆ
ದಾವಣಗೆರೆ ಜಿಲ್ಲೆಯ ವಿವಿಧೆಡೆ ಹೊಸ ತಂತ್ರಜ್ಞಾನ ಮತ್ತು ಯಾಂತ್ರಿಕತೆ ಬಳಸಿ ತೊಗರಿ, ಗೋವಿನ ಜೋಳ ಹಾಗೂ ಭತ್ತ ಬೇಸಾಯ ಬೇಸಾಯ ಮಾಡಿ ಅಧಿಕ ಇಳುವರಿ ಪಡೆದಿರುವ ಬಗ್ಗೆ ಜಂಟಿ ಕೃಷಿ ನಿರ್ದೇಶಕರು ಸಭೆಯ ಗಮನಕ್ಕೆ ತಂದರು. ಇದೊಂದು ಅಭಿನಂದನಾರ್ಹ ಬೆಳವಣಿಗೆ, ಮುಂದಿನ ವರ್ಷ ಇನ್ನಷ್ಟು ರೈತರಿಗೆ ಈ ಬಗ್ಗೆ ಅರಿವು ಮೂಡಿಸಿ ಎಂದು ಸಚಿವ ಚಲುವರಾಯಸ್ವಾಮಿ ಸಲಹೆ ನೀಡಿದರು.
ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಶೇ 100 ಆರ್ಥಿಕ, ಭೌತಿಕ ಗುರಿ ಸಾಧನೆ ಮಾಡಬೇಕು. ಅನುದಾನ ವ್ಯರ್ಥವಾಗಬಾರದು ಹಾಗೂ ಗುಣಮಟ್ಟದೊಂದಿಗೆ ಯೋಜನೆಗಳ ಅನುಷ್ಠಾನವಾಬೇಕು ಎಂದು ಕೃಷಿ ಸಚಿವರು ನಿರ್ದೇಶನ ನೀಡಿದರು.
ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ, ಮಾಯಕೊಂಡ ಶಾಸಕ ಬಸವಂತಪ್ಪ ಮತ್ತಿತರರು ಹಾಜರಿದ್ದರು