ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಧರ್ಮ ರಕ್ಷಣೆ ಹಾಗೂ ಗೋ ರಕ್ಷಣೆ ಹೆಸರಿನಲ್ಲಿ ಬೀದಿಗೆ ತಂದು ಬಿಡುತ್ತಾರೆ. ಆದರೆ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಕಳಿಸುತ್ತಾರೆ. ಧರ್ಮ ರಕ್ಷಣೆಗೆ ಯಾಕೆ ತಮ್ಮ ಮಕ್ಕಳನ್ನು ಕಳಿಸುವುದಿಲ್ಲ? ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ನಡೆದ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡುತ್ತಿದ ಅವರು, ”ಪ್ರಧಾನಿ ನರೇಂದ್ರ ಮೋದಿ ವೈಜ್ಞಾನಿಕ ಮನೋಭಾವನೆಗೆ ಒತ್ತು ನೀಡದೆ 5000 ವರ್ಷಗಳ ಹಿಂದಿನ ಆಚರಣೆಗಳನ್ನು ಅನುಸರಿಸುವಂತೆ ಕರೆ ನೀಡುತ್ತಾ ಅವುಗಳನ್ನು ಅಳವಡಿಸಿಕೊಳ್ಳುವಂತೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ನ ಕಾರ್ಯಕ್ರಮದಲ್ಲಿ ಹೇಳುತ್ತಾರೆ. ನಾನು ಹೇಳುವುದು ಇಷ್ಟೆ, ಎಲ್ಲವನ್ನೂ ಮಕ್ಕಳು ಓದಲಿ ಆದರೆ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಇತ್ತೀಚಿಗೆ ನಾನು ಅಮೆರಿಕಗೆ ಹೋದಾಗ ನಮ್ಮ ರಾಜ್ಯದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಅಲ್ಲಿ ವಿವರಿಸಿ ಹೇಳಬೇಕಿತ್ತು. ಅಲ್ಲಿನ ಕಂಪನಿಗಳ ಪ್ರಮುಖರು ಭಾರತದಲ್ಲಿ ಬಂಡವಾಳ ಹೂಡುವುದಕ್ಕೆ ಆಸಕ್ತಿ ತೋರಿಸಿದ್ದರು ಕಾರಣ ಇಲ್ಲಿನ ಮಾನವ ಸಂಪನ್ಮೂಲ… ಈ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಅವರು ಉತ್ಸುಕರಾಗಿದ್ದಾರೆ. ಇದಕ್ಕೆ ಗುಣಮಟ್ಟದ ಶಿಕ್ಷಣ ಕಾರಣವಾಗಿದೆ ಎಂದು ಹೇಳಿದರು.
”ನಮ್ಮ ದೇಶದ ಪ್ರಬಲ ಶಕ್ತಿಯೇ ಮಾನವ ಸಂಪನ್ಮೂಲ, ಈ ಸಂಪನ್ಮೂಲಕ್ಕೆ ಇಡೀ ವಿಶ್ವದಲ್ಲೇ ಬೇಡಿಕೆ ಇದೆ. ಸಶಕ್ತ ರಾಷ್ಟ್ರ ನಿರ್ಮಾಣವಾಗಬೇಕಾದರೆ ಯುವಶಕ್ತಿಯನ್ನು ಬೆಳೆಸಬೇಕು. ಯುವಕರ ಸಂಖ್ಯಾಬಲಕ್ಕೆ ಸರಿಯಾದ ಶಿಕ್ಷಣ ನೀಡಿದಾಗ ಮಾತ್ರ ರಾಷ್ಟ್ರ ನಿರ್ಮಾಣಕ್ಕೆ ಅನುಕೂಲವಾಗಲಿದೆ. ಅಣೆಕಟ್ಟು ಹಾಗೂ ರಸ್ತೆ ನಿರ್ಮಾಣದ ಜೊತೆಗೆ ಯುವಶಕ್ತಿಗೆ ವೈಜ್ಞಾನಿಕ ಶಿಕ್ಷಣ ನೀಡಿದಾಗ ಮಾತ್ರ ಸುಭದ್ರ ರಾಷ್ಟ್ರವಾಗಲಿದೆ” ಎಂದರು.
”ಸಂವಿಧಾನದ ಅಡಿಯಲ್ಲಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲರೂ ಉತ್ತಮ ಶಿಕ್ಷಣದೊಂದಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು, ಬಿ.ಆರ್.ಪಾಟೀಲ್ ಅವರಂತ ಪ್ರಗತಿಪರ
ಮನೋಭಾವದವರಿದ್ದು ಇದರಿಂದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ” ಎಂದು ಹೇಳಿದರು.