ಪೌರಕಾರ್ಮಿಕರ ಕೆಲಸ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಆಗ್ರಹಿಸಿದೆ.
ಮಂಡ್ಯ ನಗರಸಭೆಯ ಆವರಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಪೌರಕಾರ್ಮಿಕರ ಪ್ರತಿಭಟನೆ ಸ್ಥಳಕ್ಕೆ ಬಂದ ಕಾಂಗ್ರೆಸ್ ನಾಯಕರು ಪೌರಕಾರ್ಮಿಕರ ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಮಾತನಾಡಿ,ಕಳೆದ ಮೂರು ದಿನಗಳಿಂದ ಪೌರಕಾರ್ಮಿಕರು ಹೋರಾಟ ನಡೆಸುತ್ತಿದ್ದು ಸರ್ಕಾರ ಈ ಕೂಡಲೇ ಪೌರಕಾರ್ಮಿಕರ ಕಾಯಂ ಮಾಡಿಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ಪೌರಕಾರ್ಮಿಕರು ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ನಿರ್ವಹಿಸಿದ್ದಾರೆ. ಪೌರ ಕಾರ್ಮಿಕರಿಲ್ಲದೆ ಒಂದು ದಿನ ನಗರದ ಸ್ವಚ್ಛತೆ ಮಾಡಲು ಸಾಧ್ಯವಿಲ್ಲ. ಸರ್ಕಾರ ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು ಎಂದರು.
ಒಂದು ಸರ್ಕಾರಕ್ಕೆ ತಾಯಿ ಹೃದಯ ಇರಬೇಕಾಗುತ್ತದೆ. ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರ ಸಂಬಳ ಮೂರು ಪಟ್ಟು ಹೆಚ್ಚಳ ಮಾಡಿಕೊಳ್ಳುತ್ತೀರಿ ಆದರೆ ಪೌರಕಾರ್ಮಿಕರ ಸಂಬಳವನ್ನು ಹೆಚ್ಚಿಸಲು ಮೀನಾ ಮೇಷ ಎಣಿಸುತ್ತೀರಿ. ಪೌರಕಾರ್ಮಿಕರ ಜೊತೆ ಕಾಂಗ್ರೆಸ್ ಪಕ್ಷ ಎಂದೆಂದಿಗೂ ಜೊತೆಗಿದ್ದು ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಪೌರಕಾರ್ಮಿಕರ ಪ್ರತಿಭಟನೆಗೆ ನಮ್ಮ ನಾಯಕರಾದ ಸಿದ್ದರಾಮಯ್ಯನವರು ಹೋಗಿ ಬೆಂಬಲ ಸೂಚಿಸಿ ಒಂದು ಗಂಟೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.ಅದರಂತೆ ಮಂಡ್ಯದಲ್ಲೂ ನಮ್ಮ ಪಕ್ಷ ಹಾಗೂ ಪಕ್ಷದ ನಗರ ಸಭಾ ಸದಸ್ಯರು ನಿಮ್ಮ ಜೊತೆ ಹೋರಾಟದಲ್ಲಿ ಎಂದೆಂದಿಗೂ ಇರುತ್ತಾರೆ ಎಂದು ವಾಗ್ದಾನ ನೀಡಿದರು.
ನಗರಸಭಾ ಸದಸ್ಯರಾದ ನಯೀಂ,ಹಾಲಳ್ಳಿ ರವಿ, ರಾಮಲಿಂಗಯ್ಯ, ಶ್ರೀಧರ್, ಮುಖಂಡರಾದ ಬಿ.ಪಿ. ಪ್ರಕಾಶ್,ಮಂಜು,ಪೌರಕಾರ್ಮಿಕ ಮುಖಂಡ ರಾದ ನಾಗರಾಜ್, ಮಂಜುನಾಥ್, ಲಿಂಗುಮಯ್ಯ, ದಿನೇಶ್ ಮತ್ತಿತರರಿದ್ದರು.