ಮೂಕ ಮತ್ತು ಕಿವುಡ ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಜಿಲ್ಲೆಯ ಮೂಕ ಹಾಗೂ ಕಿವುಡ ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್) ನಿರ್ದೇಶಕ ಡಾ.ಮಹೇಂದ್ರ ತಿಳಿಸಿದರು.
ಮಂಡ್ಯ ವೈದ್ಯಕೀಯ ವಿಜ್ಣಾನಗಳ ಸಂಸ್ಥೆ, ಇಎನ್ ಟಿ ವಿಭಾಗ ಮಂಡ್ಯ ಹಾಗೂ ಎಒಐ ಕರ್ನಾಟಕ ಸಹಯೋಗದೊಂದಿಗೆ ಮಿಮ್ಸ್ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ಸಿಎಂಇ -2023 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಮಹತ್ವಕಾಂಕ್ಷೆ ಯೋಜನೆಯಾಗಿದ್ದು, ಸಂಸ್ಥೆಯ ಇಎನ್ಟಿ ವಿಭಾಗವು 15 ಮಕ್ಕಳಿಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾಗಿದೆ. ಈ ಶಸ್ತ್ರ ಚಿಕಿತ್ಸೆ ಉಚಿತವಾಗಿದ್ದು ಬಡವರಿಗೆ ಇದು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳ 8 ಹೆಣ್ಣು ಮಕ್ಕಳು ಹಾಗೂ 7 ಗಂಡು ಮಕ್ಕಳು ಸೇರಿ ಒಟ್ಟು 15 ಮಕ್ಕಳಿಗೆ ಇಎನ್ಟಿ ತಜ್ಞ ಡಾ.ಶಂಕರ್ ಮಡಿಕೇರಿ ಅವರ ಮಾರ್ಗದರ್ಶನದಲ್ಲಿ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಮಿಮ್ಸ್ ಇಎನ್ಟಿ ವಿಭಾಗದ ಸರ್ಜನ್ಗಳು ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮಿಮ್ಸ್ ಇಎನ್ಟಿ ವಿಭಾಗದ ಮುಖ್ಯಸ್ಥ ಡಾ.ಡಿ.ರವಿ ಮಾತನಾಡಿ, ಭಾರತದಲ್ಲಿ ಜನಿಸುವ ಒಂದು ಸಾವಿರ ಮಕ್ಕಳಲ್ಲಿ 4 ಮಕ್ಕಳಲ್ಲಿ ಹುಟ್ಟು ಕಿವುಡುತನ ಹೊಂದಿರುತ್ತವೆ. ಈ ಶಸ್ತ್ರಚಿಕಿತ್ಸೆಯನ್ನು ಮಗು ಹುಟ್ಟಿದ 6 ವರ್ಷಗಳೊಳಗೆ ಮಾಡುವುದು ಅಗತ್ಯವಾಗಿದೆ. ಕಿವುಡತನ ಹೊಂದಿರುವ ಮಕ್ಕಳಿಗೆ 2ರಿಂದ 3 ವರ್ಷದೊಳಗೆ ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ಡಾ.ಶಂಕರ್ ಮಡಿಕೇರಿ ಮಾತನಾಡಿ, ಕಾಕ್ಲಿಯರ್ ಕಸಿ ಶಸ್ತ್ರಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಿಸುವುದಾದರೆ ಕನಿಷ್ಠ 8 ರಿಂದ 9 ಲಕ್ಷ ರೂ.ವರೆಗೆ ವೆಚ್ಚವಾಗಲಿದೆ. ಬಡವರಿಗೆ ಈ ಶಸ್ತ್ರಚಿಕಿತ್ಸೆ ಎಟುಕದಂತಾಗಿತ್ತು. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲೇ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸುತ್ತಿರುವುದು ಕಿವುಡುತನವಿರುವ ಬಡ ಮಕ್ಕಳಿಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಯಿಮ್ಸ್ ನಿರ್ದೇಶಕ ಡಾ. ಮಹದೇವ್ ಪ್ರಸಾದ್, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಡಾ.ರಾಮಲಿಂಗಯ್ಯ ಹಾಜರಿದ್ದರು.