ಕಾವೇರಿ ವಿಚಾರದಲ್ಲಿ ರಾಜ್ಯದ ರೈತರ ಹಿತ ಕಾಪಾಡುವಂತೆ ಆಗ್ರಹಿಸಿ ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ನಿರಂತರ ಧರಣಿಗೆ ಗುರುವಾರ ಮಂಡ್ಯದ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದರು.
ಕಾವೇರಿ ಹೋರಾಟಗಾರರ ಜೊತೆಗೂಡಿದ ವಿದ್ಯಾರ್ಥಿಗಳು ರಸ್ತೆಗಿಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.
ವಿದ್ಯಾರ್ಥಿನಿ ಮೇಘನಾ ಮಾತನಾಡಿ, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಆದ ಒಪ್ಪಂದ ಸ್ವಾತಂತ್ರ ನಂತರ ಮುಂದುವರೆದಿದೆ, ಇದುವರೆಗೆ ನಮ್ಮನ್ನ ಹಲವು ಸರ್ಕಾರಗಳು ಆಳ್ವಿಕೆ ಮಾಡಿವೆ ಆದರೆ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿ ರೈತರ ಹಿತ ಕಾಪಾಡುವುದಾಗಿ ಹೇಳಿದ್ದಾರೆ, ಆದರೆ ಅವರು ವಿಧಾನಸೌಧ ತಲುಪುತ್ತಿದ್ದಂತೆ ಆಡಳಿತದಲ್ಲಿ ತಲ್ಲಿನರಾಗಿ ಇದನ್ನು ಮರೆತುಬಿಡುತ್ತಾರೆ, ಚುನಾಯಿತ ಜನಪ್ರತಿನಿಧಿಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕಾಗಿದೆ. ನೀರು ಪ್ರಕೃತಿ ದತ್ತ ಕೊಡುಗೆ, ನೀರು ಇದ್ದಾಗ ತಾನೇ ತಾನಾಗಿ ಹರಿದು ಹೋಗಿದೆ, ಆದರೆ ತಮಿಳುನಾಡು ಸಂಕಷ್ಟಕಾಲದಲ್ಲಿ ನೀರಿಗಾಗಿ ಹಠಮಾರಿ ಧೋರಣೆ ತಾಳುತ್ತಿರುವುದು ಸರಿಯಲ್ಲ ಎಂದರು.
ಧರಣಿಯಲ್ಲಿ ಮಾಂಡವ್ಯ ಸಂಸ್ಥೆಯ ಮೀರಾ ಶಿವಲಿಂಗಯ್ಯ, ಪ್ರಾಂಶುಪಾಲ ಭವಾನಿ ಶಂಕರ್, ಉಪನ್ಯಾಸಕರಾದ ಚೈತ್ರ, ಚಂದ್ರ ಕುಮಾರ್, ವಿದ್ಯಾರ್ಥಿ ಕಿಶನ್, ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ,ಕೆ ಬೋರಯ್ಯ, ಅಂಬುಜಮ್ಮ ಕನ್ನಡ ಸೇನೆ ಮಂಜುನಾಥ್, ನಾರಾಯಣ್, ರೈತಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ ಮತ್ತಿತರಿದ್ದರು.