ಮದ್ದೂರಿನಲ್ಲಿ ಹಿಂದೆಂದೂ ಕಂಡರಿಯದ ರಾಜಕೀಯ ರಂಗು ಗರಿಗೆದರಿದೆ. ಮತದಾರರ ಮನ ಮುಟ್ಟಲು ಹಲವು ವಿನೂತನ ಕಾರ್ಯಕ್ರಮ ರೂಪಿಸುವ ಮೂಲಕ ಮದ್ದೂರು ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿರುವ ಕದಲೂರು ಉದಯ್ ತಮ್ಮ ಹೆಸರಿನ ಚಾರಿಟಬಲ್ ಟ್ರಸ್ಟ್ ಮೂಲಕ ಮದ್ದೂರು ಪಟ್ಟಣದ ಚಂದ್ರಮೌಳೇಶ್ವರ ರೈಸ್ ಮಿಲ್ ಬಳಿಯ ತಮಿಳು ಕಾಲೋನಿಯಲ್ಲಿ ಇಂದು ಬೆಳಗ್ಗಿನಿಂದಲೇ ದೀಪಾವಳಿ ಹಬ್ಬಕ್ಕೆ ರೇಷನ್ ಕಿಟ್ ವಿತರಿಸುತ್ತಿದ್ದಾರೆ.
ಬೆಳ್ಳಂ ಬೆಳಿಗ್ಗೆ ಮಂಜು ಆವರಿಸಿ ನಿದ್ದೆಯ ಮಂಪರಿನಲ್ಲಿದ್ದ ಜನರಿಗೆ ಕದಲೂರು ಉದಯ್ ಅಭಿಮಾನಿ ಬಳಗ ರೇಷನ್ ಕಿಟ್ ಜೊತೆ ಆಗಮಿಸಿ ಮನೆ ಮನೆಗೆ ಕಿಟ್ ಕೊಡುತ್ತಿದಂತೆ ಜನರು ಆಶ್ಚರ್ಯ ಮತ್ತು ಹರ್ಷ ಚಿತ್ತರಾಗಿ ಗುಂಪುಗೂಡಿ ಉದಯ್ ಅವರನ್ನು ಸುತ್ತುವರಿದು ಕಿಟ್ ಪಡೆದರು.
ರೇಷನ್ ಕಿಟ್ ವಿತರಣೆ ಬಗ್ಗೆ ಯಾವುದೇ ಪ್ರಚಾರ ಮತ್ತು ಮಾಹಿತಿ ಇಲ್ಲದೆ ದಿಢೀರನೆ ಕಂಡು ಬಂದ ಈ ಪ್ರಕ್ರಿಯೆ ತಮಿಳು ಕಾಲೋನಿಯ ಜನರನ್ನಷ್ಟೇ ಅಲ್ಲದೆ ಮದ್ದೂರು ಪಟ್ಟಣದ ಇತರೆಡೆಯೂ ಈ ದೃಶ್ಯ ಕಂಡ ಎಲ್ಲರಲ್ಲೂ ಈ ಬಾರಿಯ ಚುನಾವಣೆ ಹಿಂದೆಂದಿಗಿಂತಲೂ ಖದರ್ ಆಗಿ ನಡೆಯುತ್ತದೆಂದು ಕೂತೂಹಲ ಹುಟ್ಟಿಸಿದೆ.
ಈ ಸಲದ ಚುನಾವಣೆಯ ತೀವ್ರತೆಯ ಲೆಕ್ಕಾಚಾರವನ್ನು ಈಗಾಗಲೇ ರಾಜಕೀಯ ಆಸಕ್ತರು ಮಾಡತೊಡಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡು ಇಡೀ ತಾಲ್ಲೂಕಿನಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ರಾಜಕೀಯ ಚರ್ಚೆ ಆರಂಭವಾಗಿದೆ.
ಒಟ್ಟಾರೆ ಮದ್ದೂರಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿತರು ಅಕ್ಷರಶಃ ಚುನಾವಣೆ ಸಿದ್ದತೆಯೊಂದಿಗೆ ಭರ್ಜರಿ ಪ್ರಚಾರ ಆರಂಭಿಸಿ ಬಿಟ್ಟಿದ್ದಾರೆ.ಜನರಲ್ಲಿ ಮುಂದೆನಾಗುವುದೋ ಎಂಬ ಕುತೂಹಲ ಮೂಡಿದೆ.