ಚುನಾವಣಾ ಸಂದರ್ಭದಲ್ಲಿ ಆಸ್ತಿ ಕುರಿತು ಪೂರ್ಣ ಮಾಹಿತಿ ನೀಡದ ಆರೋಪದ ಮೇಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಹೋರಾಟಗಾರ ಸಿ ಎಸ್ ಸಿದ್ದರಾಜು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
“2004ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕೇತನಗಾನಹಳ್ಳಿಯಲ್ಲಿ 24 ಎಕರೆ ಜಮೀನಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ವಿವಿಧ ಸರ್ವೇ ನಂಬರ್ ಗಳಲ್ಲಿ 1, 2, 3, 4 ಎಕರೆ ಜಮೀನು ಖರೀದಿ ಮಾಡಿರುವುದಾಗಿ ಹೇಳಿದ್ದಾರೆ. ಹಾಗೆ ತನ್ನ ಚಿಕ್ಕಮ್ಮ ಸಾವಿತ್ರಮ್ಮರಿಂದ ದಾನ ಪಡೆದಿರುವುದಾಗಿಯೂ ಹೇಳಿದ್ದಾರೆ. ಸಾವಿತ್ರಮ್ಮನವರಿಗೆ ಕುಮಾರಸ್ವಾಮಿ ಬೇನಾಮಿಯಾಗಿದ್ದಾರಾ? ಅಥವಾ ತಾಯಿಯ ಸಹೋದರಿಯ ಆದಾಯದ ಮೂಲ ಯಾವುದು?” ಎಂದು ಪ್ರಶ್ನಿಸಿದ್ದಾರೆ.
2008 ಹಾಗೂ 2018ರ ಚುನಾವಣೆಯ ಅಫಿಡವಿಟ್ ನಲ್ಲಿ ಬೆಂಗಳೂರಿನ ಜೆಪಿ ನಗರದ ಮನೆಯನ್ನ ಖರೀದಿ ಮಾಡಿದ್ದಾಗಿ ಉಲ್ಲೇಖಿಸಿದ್ದಾರೆ. 2023ರ ಚುನಾವಣೆಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಅದೇ ಮನೆಯನ್ನ 1995ರಲ್ಲಿ ಖರೀದಿಸಿರುವ ಬಗ್ಗೆ ಮಾಹಿತಿ ಇದೆ. ಪೂರ್ಣ ಪ್ರಮಾಣದ ಮಾಹಿತಿ ನೀಡದೇ ವಂಚಿಸಿದ್ದಾರೆ ಎಂದು ಸಿ ಎಸ್ ಸಿದ್ಧರಾಜು ಅವರು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
“ಅನಿತಾ ಕುಮಾರಸ್ವಾಮಿಯವರು ಕುಪೇಂದ್ರ ರೆಡ್ಡಿಯವರಿಂದ 9 ಕೋಟಿ 50 ಲಕ್ಷ ಸಾಲ ಪಡೆದಿರುವುದಾಗಿ ಹೇಳಿದ್ದಾರೆ. ಆದರೆ, 2022 ರಲ್ಲಿ ಕುಪೇಂದ್ರರೆಡ್ಡಿಯವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಚೆನ್ನಾಂಬಿಕ ಫಿಲ್ಮ್ ಸಂಸ್ಥೆಗೆ 4 ಕೋಟಿ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.