ಸುಪ್ರೀಂ ಕೋರ್ಟ್ ಆದೇಶದಂತೆ ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಿತು.
ಮಂಡ್ಯ ನಗರದ ಸಂಜಯ ವೃತ್ತದಿಂದ ಸಮಿತಿಯ ಕಾರ್ಯಕರ್ತರು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ರವಾನಿಸಿದರು.
ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿಗಾಗಿ ಸುದೀರ್ಘ ಹೋರಾಟ ನಡೆದರೂ ರಾಜ್ಯವನ್ನಾಳಿದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸರ್ಕಾರಗಳು ಒಳ ಮೀಸಲು ಜಾರಿಗೆ ಇಚ್ಛಾಸಕ್ತಿ ತೋರಲಿಲ್ಲ, ಇದೀಗ ಸರ್ವೋಚ್ಚ ನ್ಯಾಯಾಲಯ ಒಳ ಮೀಸಲಾತಿ ಜಾರಿಗೆ ಸಮ್ಮತಿಸಿರುವುದು ಸ್ವಾಗತಾರ್ಹ, ರಾಜ್ಯ ಸರ್ಕಾರ ಅನಾವಶ್ಯಕವಾಗಿ ಉಪಸಮಿತಿ ರಚನೆ ನಾಟಕವನ್ನಾಡದೆ ನ್ಯಾ. ಎ.ಜೆ ಸದಾಶಿವ ಆಯೋಗದ ವರದಿ ಹಾಗೂ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಎಚ್ ಕಾಂತರಾಜು ವರದಿ ಆಧರಿಸಿ ಪರಿಶಿಷ್ಟರ ಮೀಸಲು ನೀತಿ ಜಾರಿಗೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಸರ್ವೋಚ್ಚ ನ್ಯಾಯಾಲಯ ತೀರ್ಪಿನಲ್ಲಿ ಪರಿಶಿಷ್ಟರ ಮೀಸಲಾತಿ ನೀತಿಯಲ್ಲಿ ಕ್ರಿಮಿಲೇಯರ್ ಪದ್ಧತಿ ಅಳವಡಿಸಲು ಸಂವಿಧಾನ ಪೀಠದ ಬಹುತೇಕ ನ್ಯಾಯಾಧೀಶರು ಸೂಚಿಸಿದ್ದು, ರಾಜ್ಯ ಸರ್ಕಾರ ವೈಜ್ಞಾನಿಕ ಮಾನದಂಡ ಅನುಸರಿಸಿ ಕ್ರಿಮಿ ಲೇಯರ್ ಪದ್ಧತಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಚೆನ್ನಾರೆಡ್ಡಿ ಮತ್ತು ಅವನ ಮಗ ಸೊನ್ನಿಗೌಡರ ಲಂಚ ಬಾಕತನಕ್ಕೆ ಪೋಲಿಸ್ ಸಬ್ ಇನ್ ಸ್ಪೆಕ್ಟರ್ ಪರಶುರಾಮ್ ಛಲವಾದಿ ಬಲಿಯಾಗಿದ್ದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು, 30 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಿಗಳನ್ನು ಪರಿಶಿಷ್ಟ ಜಾತಿ.ಪಂಗಡ ದೌರ್ಜನ್ಯ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.
ದಸಂಸ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಜಿಲ್ಲಾಧ್ಯಕ್ಷ ಬಿ.ಆನಂದ್, ವೈ ಸುರೇಶ್ ಕುಮಾರ್, ಕೆ.ಎಂ ಅನಿಲ್ ಕುಮಾರ್, ಸುಮಿತ್ರ, ಸರಳ, ರಾಮಕೃಷ್ಣ ಸಂಪಳ್ಳಿ, ಸಿದ್ದಯ್ಯ ದೊಡ್ಡಭೂಹಳ್ಳಿ ಮತ್ತಿತರರು ಭಾಗವಹಿಸಿದ್ದರು.