ಕೇಂದ್ರ ಲೋಕಸೇವಾ ಆಯೋಗ (ಯು.ಪಿ.ಎಸ್.ಸಿ) ನಡೆಸಿದ ಪರೀಕ್ಷೆಯಲ್ಲಿ 731 ರ್ಯಾಂಕ್ ಪಡೆದು ತೇರ್ಗಡೆಯಾಗಿರುವ ಮಳವಳ್ಳಿ ತಾಲ್ಲೂಕಿನ ಬಿರೋಟ ಗ್ರಾಮದ ಗ್ರಾಮೀಣ ಪ್ರತಿಭೆ ಬಿ.ಎಸ್.ಚಂದನ್ ಅವರನ್ನು ಮಂಗಳವಾರ ಮಂಡ್ಯದಲ್ಲಿ ಆತ್ಮೀಯವಾಗಿ ಅಭಿನಂದಿಸಲಾಯಿತು.
ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ನಾಗರೀಕರು, ಸಾಧಕ ಅಭಿಮಾನಿಗಳು ಮತ್ತು ಗುರು ವೃಂದದ ನೇತೃತ್ವದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಅಭಿನಂದಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಳವಳ್ಳಿ ತಾಲ್ಲೂಕಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಪರೀಕ್ಷೆಗಳಾದ ಯುಪಿಎಸ್.ಸಿ ಮತ್ತು ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸುಗಳಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮದಲ್ಲಿನ ನ್ಯಾಯ ಬೆಲೆ ಅಂಗಡಿಗಳು ಮುಚ್ಚಿದರೇ, ಸಾರ್ವಜನಿಕರು ಪಡಿತರ ಇಲ್ಲದೇ ಯಾವ ರೀತಿ ಸಂಕಷ್ಟ ಅನುಭವಿಸಬೇಕಾಗುತ್ತದೆಯೋ, ಅದೇ ರೀತಿ ಸರ್ಕಾರಿ ಶಾಲೆಗಳು ಮುಚ್ಚಿ ಹೋದರೇ ಗ್ರಾಮೀಣ ಭಾಗದ ಜನರ ಜ್ಞಾನದ ಕೊರತೆ ಎದುರಿಸಬೇಕಾಗುತ್ತದೆ. ಅದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಬಿತ್ತುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಎಚ್ಚರಿಸಿದರು.
ಸ್ವಾತಂತ್ರ್ಯ ನಂತರವೂ ನಮ್ಮ ದೇಶದಲ್ಲಿ ಶೇ.19 ಕಡುಬಡವರು, ಶೇ.23ರಷ್ಟು ಬಡವರು ಇರುವುದು ದುರಂತ. ದೇಶದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುವ ಮೂಲಕ ನಮ್ಮ ಜವಾಬ್ದಾರಿ ಅರಿತು ‘ರಾಷ್ಟ್ರ ದೇವೋಭವ’ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಬಡತನ ನಿರ್ಮೂಲನೆಗೆ ಶ್ರಮಿಸಬೇಕಿದೆ ಎಂದು ಸಲಹೆ ನೀಡಿದರು.
ಸಾಧನೆಯ ಹಾದಿಯಲ್ಲಿ ಕಠಿಣ ಸವಾಲು
ಅಭಿನಂದನೆ ಸ್ವೀಕರಿಸಿದ ಯು.ಪಿ.ಎಸ್.ಸಿ ಸಾಧಕ ಬಿ.ಎಸ್.ಚಂದನ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳು ಸಾಧನೆ ಮಾಡಲಾಗದು ಎಂಬ ಮನೋಭಾವನೆ ಗ್ರಾಮೀಣ ಪ್ರದೇಶದಲ್ಲಿನ ಜನರಲ್ಲಿದೆ. ಯಾವುದೇ ಅಭ್ಯರ್ಥಿಗಳು ಸಾಧನೆಯ ಹಾದಿಯಲ್ಲಿ ಕಠಿಣ ಸವಾಲುಗಳನ್ನು ಮೆಟ್ಟಿ ನಿಲ್ಲುವ ಜೊತೆಗೆ ಸ್ಪಷ್ಟ ಗುರಿಯೆಡೆಗೆ ನಿರಂತರ ಪ್ರಯತ್ನ ಮಾಡಿದ್ದೇ ಆದರೆ ಸಾಧನೆ ನಮ್ಮ ಹೆಗಲೆರುವುದು ಖಚಿತ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ಧೇನೆ ಎಂದರು.
ಪೋಷಕರು ಇತಂಹ ವಿಷಯವನ್ನೇ ಕಲಿಯಬೇಕೆಂದು ಮಕ್ಕಳ ಮೇಲೆ ಒತ್ತಡ ಹೇರಬಾರದು. ಕಲೆ, ಸಂಗೀತಾ ಮತ್ತು ಕ್ರೀಡಾ ರಂಗದಲ್ಲಿಯೂ ಸಹ ಸಾಧನೆ ಮಾಡಲು ಸಾಕಷ್ಟು ವಿಪುಲವಾದ ಅವಕಾಶಗಳಿವೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೇ ಮಾಡಿದರೇ ಉತ್ತಮ ಸಾಧನೆ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಐ.ಆರ್.ಎಸ್.ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ಸವಿತಾ, ಬಿ.ಎಸ್.ಚೇತನ್ ಸೇರಿದಂತೆ ಹಲವರು ಇದ್ದರು.