ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಗಣೇಶ ಚತುರ್ಥಿ ವಿಸರ್ಜನಾ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಬಿಜೆಪಿ ಶಾಸಕ ಹಾಗೂ ದ್ವೇಷ ಭಾಷಣಕಾರ ಹರೀಶ್ ಪೂಂಜಾ ಅವರನ್ನು ಮುಖ್ಯ ಅತಿಥಿಯಾಗಿ ಸ್ವಾಗತಿಸಿದ್ದು, ಸಾರ್ವಜನಿಕರಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಯುವಕರ ಸೇನೆ ಆಯೋಜಿಸಿರುವ ಗಣೇಶೋತ್ಸವ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್ ನಾಯಕರೇ ಬಿಜೆಪಿ ಶಾಸಕರನ್ನು ಆಹ್ವಾನಿಸಿರುವುದು ಕಾಂಗ್ರೆಸ್ನ ಕೆಲವು ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ.
ಮಾನ್ವಿ ನಗರದಲ್ಲಿ ವಿವಿಧ ಮುಖ್ಯ ರಸ್ತೆಗಳಲ್ಲಿ ಹರೀಶ್ ಪೂಂಜಾ ಅವರನ್ನು ಸ್ವಾಗತಿಸಿ ಹಾಕಿರುವ ಫ್ಲೆಕ್ಸ್ನಲ್ಲಿ ಜಿಲ್ಲೆಯ ಸಚಿವರಾದ ಎನ್ ಎಸ್ ಬೋಸರಾಜ, ಅವರ ಮಗ ರವಿ ಬೋಸರಾಜ್, ಮಾನ್ವಿ ಶಾಸಕ ಹಂಪಯ್ಯ ನಾಯಕ, ಎಂಎಲ್ಸಿ ಬಸನಗೌಡ ಬಾದರ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಯಕ್ರಮದ ಮುಖ್ಯ ಸಂಘಟಕರಾಗಿರುವ ಎಂಎಲ್ಸಿ ಬಸನಗೌಡ ಬಾದರ್ಲಿ ಹಾಗೂ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಸಹಪಾಠಿಗಳು(ಕ್ಲಾಸ್ಮೇಟ್ಸ್) ಎನ್ನಲಾಗಿದೆ. ಹೀಗಾಗಿ, ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದಾರೆ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬಂದಿದೆ.
ಸದಾ ವಿವಾದಾತ್ಮಕ ಹೇಳಿಕೆ ಹಾಗೂ ಮುಸ್ಲಿಂ ಸಮುದಾಯ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರ ವಿರುದ್ಧ ದ್ವೇಷ ಭಾಷಣ ಮಾಡುವುದರಿಂದಲೇ ಗುರುತಿಸಿಕೊಂಡಿರುವ ಬಿಜೆಪಿಯ ಶಾಸಕ ಹರೀಶ್ ಪೂಂಜಾರನ್ನು ಕಾಂಗ್ರೆಸ್ ನಾಯಕರು ಫ್ಲೆಕ್ಸ್ ಹಾಕಿ ಸ್ವಾಗತ ಕೋರಿರುವುದು, ವ್ಯಾಪಕ ಆಕ್ರೋಶಕ್ಕೂ ವ್ಯಕ್ತವಾಗಿದೆ.