✍️ ಪೂರ್ಣಿಮ ಜಿ. ಸಾಮಾಜಿಕ ಕಾರ್ಯಕರ್ತೆ. ಕರ್ನಾಟಕ ಜನಶಕ್ತಿ.
- ಮಹಾತ್ಮನ ಬಲಿದಾನವನ್ನು ವ್ಯರ್ಥವಾಗಿಸುವ ಹುನ್ನಾರಗಳು ಕೇಕೆ ಹಾಕುತ್ತಿವೆ.
- ಗಾಂಧಿಯನ್ನು ಕೊಂದವರೆ ಗೌರಿಯನ್ನು ಕೊಂದರು, ಗಾಂಧಿಯನ್ನು ಕೊಂದವರೆ ದಾಬೊಲ್ಕರ್ ಮತ್ತು ಪನ್ಸಾರೆ ರವರನ್ನು ಕೊಂದರು.
- ಈ ದೇಶದ ನೆಲದಲ್ಲಿ ಸುಳ್ಳುಗಳು,ಹಿಂಸೆಗಳು, ಸರ್ವಾಧಿಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ.
ಜನವರಿ 30 ದೇಶದ ಕರಾಳ ದಿನ, ಮಹಾತ್ಮನನ್ನು ಕೊಂದ ದಿನ,ಬರಿ ಮಹಾತ್ಮ ಗಾಂಧಿಯನ್ನು ಕೊಂದಿದ್ದು ಮಾತ್ರವಲ್ಲ ಅಹಿಂಸೆಯನ್ನು ಕೊಂದು, ಹಿಂಸೆ ಎಂಬುದು ವಿಜೃಂಭಿಸಿ ಅಟ್ಟಹಾಸ ಮೆರೆದ ದಿನ. ಗಾಂಧಿಯನ್ನು ಕೊಂದವರು,ಕೊಲೆಗೆ ಸಂಚು ರೂಪಿಸಿದವರು ಈ ದಿನ ದೇಶ ಪ್ರೇಮಿಗಳಾಗುತ್ತಿದ್ದಾರೆ.ಇದನ್ನು ವಿರೋಧಿಸಿದವರು ನಿಜವಾದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರೆಲ್ಲ ದೇಶ ದ್ರೋಹಿಗಳಾಗುತ್ತಿದ್ದಾರೆ.
ನಾವು ಗೋಡ್ಸೆ ಸಂತತಿಗಳು,ನಾವೆ ಗಾಂಧಿಯನ್ನು ಕೊಂದಿದ್ದು ಏನಿವಾಗ ? ಎನ್ಮಾಡ್ತೀರಾ…? ಎಂದು ಅಹಂಕಾರದಲ್ಲಿ ಬಹಿರಂಗವಾಗಿ ಹೇಳಿಕೊಳ್ಳುವ ಕೊಲೆಪಾತಕರ ಕೈಯಲ್ಲಿ ದೇಶ ಇಂದು ನರಳುತ್ತಿದೆ. ಗಾಂಧಿ ಕಂಡ ಕನಸಿನ ಭಾರತ ಕನಸಾಗೆ ಉಳಿದಿದೆ. ಮಹಾತ್ಮನ ಬಲಿದಾನವನ್ನು ವ್ಯರ್ಥವಾಗಿಸುವ ಹುನ್ನಾರಗಳು ಕೇಕೆ ಹಾಕುತ್ತಿವೆ.
ಗಾಂಧಿಯನ್ನು ಕೊಂದವರೆ ಗೌರಿಯನ್ನು ಕೊಂದರು, ಗಾಂಧಿಯನ್ನು ಕೊಂದವರೆ ದಾಬೊಲ್ಕರ್ ಮತ್ತು ಪನ್ಸಾರೆ ರವರನ್ನು ಕೊಂದರು. ಗಾಂಧಿಯನ್ನು ಕೊಂದವರೆ ಈ ದಿನ ನ್ಯಾಯದ ಪರವಾದ ಧ್ವನಿಗಳನ್ನು ಅಡಗಿಸ ಹೊರಟವರು,ಬಂಧಿಸ ಹೊರಟವರು. ಹಾಗೆ ಕೊಲ್ಲಬೇಕು, ಬಂಧಿಸಿಬೇಕು ಎಂದು ಅವರು ಪಣ ತೊಟ್ಟರೆ ದೇಶವನ್ನೆ ಬಂಧಿಸಬೇಕಾಗುತ್ತದೆ. ದೇಶದ ಶೇ.75 ರಷ್ಟು ಮಂದಿಯನ್ನು ಕೊಲ್ಲಬೇಕಾಗುತ್ತದೆ.ಮತ್ತೆ ಉಳಿಯುವುದು ಇವರ ಅನುಯಾಯಿಗಳು, ಹಿಂಸಾವಾದಿಗಳು ಶೇ. 25 ರಷ್ಟು ಮಾತ್ರ. ಆನಂತರ ಕೊಲ್ಲಲ್ಲು ದ್ವೇಷಿಸಲು ಯಾರು ಸಿಗದಿದ್ದಾಗ.ಇರುವಷ್ಟು ಮಂದಿ ಅವರನ್ನು ಅವರೆ ದ್ವೇಷಿಸಿಕೊಂಡು,ಅವರನ್ನು ಅವರೆ ಕೊಂದುಕೊಳ್ಳಬೇಕಾಗುತ್ತದೆ. ಕೊನೆಗೆ ಉಳಿಯುವುದಾರೂ ಏನು…? ಇವರು ಹಿಂಸಿಸಿ ಸುಟ್ಟ ಬೂದಿಯ ಕುರುಹು ಮಾತ್ರ.
ಇಂತಹ ಪರಿಸ್ಥಿತಿಗಾಗಿ ತಮ್ಮ ಪ್ರಾಣಗಳನ್ನು ಬಲಿದಾನಗಳಾಗಿ ತ್ಯಾಗ ಮಾಡಿದರೆ ನಮ್ಮ ಹಿರಿಯರು. ಗಾಂಧಿ ಕಂಡ ಕನಸಿನ ಭಾರತದ ಪರಿಕಲ್ಪನೆ ಇದೆಯೆ…? ಎಂಬ ಪ್ರಶ್ನೆ ನಮ್ಮೆಲ್ಲರ ಅಂತರಾತ್ಮವನ್ನು ಕಲಕಬೇಕಲ್ಲವೆ…ಮತ್ಯಾಕೆ ಹಾಗಾಗುತ್ತಿಲ್ಲ.
ಏಕೆಂದರೆ ಇವತ್ತಿನ ನಮ್ಮ ಯುವ ಸಮುದಾಯವನ್ನು ಸುಳ್ಳಿನ ಭ್ರಮೆಗೆ ಸಿಲುಕಿಸಿ ಹಿಂಸೆಗೆ ಜೈ ಎನ್ನುವಂತೆ ಮಾಡುತ್ತಿದ್ದಾರೆ. ಸುಳ್ಳಿನ ಕೋಟೆಯನ್ನು ಗಾಜಿನಲ್ಲಿ ನಿರ್ಮಾಣ ಮಾಡಿಕೊಂಡು, ಹೊರಗಿನ ಪ್ರಪಂಚವನ್ನು ನಮ್ಮ ಕೋಟೆಯೊಳಗೆ ನಿಂತು ನೋಡಿ ಅಂದಾಜಿಸಿ, ಇಲ್ಲಿಂದಲೆ ಗುಂಡೊ,ಕಲ್ಲೊ,ಹೊಡೆದು ಉರುಳಿಸಬಹುದೆಂಬ ಭ್ರಮೆಯಲ್ಲಿ ತೇಲುತ್ತಿರುವ ಮತಿಹೀನರಿಗೆ ತಿಳಿದಿಲ್ಲ.ಸುಳ್ಳಿನ ಗಾಜಿನ ಕೋಟೆಯು ಛಿದ್ರವಾಗಿ ಸತ್ಯದ ಅನಾವರಣಕ್ಕೆ ನಮ್ಮ ಅತಿರೇಕದ ಕೆಲಸಗಳೆ ದಾರಿಯಾಗುತ್ತವೆಂದು. ಜೈ ಎನ್ನುತ್ತಿರುವ ಇವತ್ತಿನ ಯುವ ಸಮುದಾಯವು ಕೂಡಾ ಥೂ.. ಎಂದು ರೊಚ್ಚಿಗೇಳುವ ದಿನವೂ ಮುಂದೊಂದು ದಿನ ಬರಲಿದೆ ಎಂದು.
ಮುಂದೊಂದು ಭರಣಿಗೆ ಉರಿವ ಈ ಧರೆಗೆ ಬೋರ್ಗರೆದು ಮಳೆಯು ಸುರಿಯುವುದು ಆ ನಾಳೆಯೂ ಬಂದೆ ಬರುವುದು,ಒಡಲಲ್ಲಿ ಉಸಿರ ಬಿಗಿದಿಟ್ಟು ಕಾಯುತ್ತಿರುವ ಸತ್ಯದ ಬೀಜಗಳು ಚಿಗುರಿಯೇ ಚಿಗುರುವುದು.
ಒಟ್ಟಾರೆಯಾಗಿ ಈ ದೇಶದ ನೆಲದಲ್ಲಿ ಸುಳ್ಳುಗಳು,ಹಿಂಸೆಗಳು,ಸರ್ವಾಧಿಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ, ಇದಕ್ಕೆ ಸಾಕ್ಷಿ ಬ್ರಿಟಿಷರು ಈ ನೆಲದಿಂದ ತಾವಾಗಿ ತಾವೆ ಸ್ವಾಂತ್ರವನ್ನು ಘೋಷಿಸಿ ದೇಶ ಬಿಟ್ಟು ತೊಲಗುವಂತೆ ಮಾಡಿದ್ದು ,ಅವರ ಎದೆ ನಡುಗಿಸಲು ಇದ್ದ ಕಾರಣಗಳಲ್ಲಿ ಗಾಂಧಿಯ ಅಹಿಂಸಾ ತತ್ವ ಹಾಗೂ ಉಪವಾಸ ಸತ್ಯಾಗ್ರಹವು ಮುಖ್ಯವಾದದ್ದು ಎಂಬುದನ್ನು ಈ ದೇಶ- ನಾಡು ಮರೆಯುವಂತಿಲ್ಲ, ಮರೆಯುವುದು ಇಲ್ಲ.
ಗಾಂಧಿಯ ಕನಸಿನ ಭಾರತಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸೋಣ ಮುನ್ನಡೆಯೋಣ.