ಕಾವೇರಿ ನದಿ ನೀರಿನ ಉಳಿವಿಗಾಗಿ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮಂಡ್ಯದಲ್ಲಿ ನಡೆಯುತ್ತಿರುವ ನಿರಂತರ ಧರಣಿಯು ನಾಳೆ ವಿಜಯದಶಮಿ ದಿನದಂದು 50ನೇ ದಿನಕ್ಕೆ ಕಾಲಿಡಲಿದ್ದು, ಈ ದಿನವನ್ನು ಕರಾಳ ದಿನವನ್ನಾಗಿ ಆಚರಿಸಿ, ಸರ್ಕಾರದ ವಿರುದ್ದ ಕಪ್ಪು ಬಾವುಟ ಪ್ರದರ್ಶಿಸಲು ಸಮಿತಿಯು ಜಿಲ್ಲೆಯ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದೆ.
ಕಾವೇರಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಧೋರಣೆಗಳನ್ನು ವಿರೋಧಿಸಿ ಜಿಲ್ಲೆಯ ರೈತರು, ಪ್ರಗತಿಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಪಕ್ಷಾತೀತವಾಗಿ ಮಂಡ್ಯದಲ್ಲಿ ಅ.24ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಸಮಿತಿಯು ಮನವಿ ಮಾಡಿದೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ಜಿಲ್ಲೆಯ ಎಲ್ಲಾ ಪ್ರಗಪರ ಸಂಘಟನೆಗಳು ಒಗ್ಗೂಡಿ ಆ.31ರಿಂದ ಮಂಡ್ಯ ನಗರದ ಸರ್.ಎಂ.ವಿ. ಪ್ರತಿಮೆ ಮುಂಭಾಗದಲ್ಲಿ ನಿರಂತರವಾಗಿ ಧರಣಿ ಮಾಡಿಕೊಂಡು ಬಂದಿದ್ದರೂ ಇಲ್ಲಿಯವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸಿವೆ, ಇದರಿಂದಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ಆದ್ದರಿಂದ ಎಲ್ಲರೂ ಕರಾಳ ದಿನ ಆಚರಣೆ ಮಾಡಬೇಕೆಂದು ಕರೆ ನೀಡಿದೆ.
ರಾಜ್ಯದ ಕಾವೇರಿ ಕೊಳ್ಳದ 8 ಜಿಲ್ಲೆಗಳಿಗೆ ಶಾಶ್ವತ ನ್ಯಾಯವಾಗುತ್ತಿದ್ದು, ರಾಜ್ಯದ ನೀರಿನ ಹಕ್ಕನ್ನು ಕಾನೂನಿನ ಮೂಲಕ ಕಸಿದುಳ್ಳಲಾಗಿದೆ. ಭವಿಷ್ಯದ ಮುಂದಿನ ದಿನಗಳಲ್ಲಿ ತಾವೇ ಕಟ್ಟಿದ ಆಣೆಕಟ್ಟುಗಳನ್ನು ತಮಿಳುನಾಡು ರಾಜ್ಯದ ಸ್ವಾಧೀನಕ್ಕೊಳಪಡುವ ಸಂಭವ ಸ್ಪಷ್ಟವಾಗಿ ಕಾಣುತ್ತಿದೆ. ಇದು ಅತ್ಯಂತ ಘೋರ ಹಾಗೂ ಗಂಭೀರ ವಿಷಯವಾಗಿದ್ದು ಕಾವೇರಿ ನದಿ ನೀರನ್ನು ಸಂರಕ್ಷಿಸಿಕೊಳ್ಳಲು ಈ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಇಂದಿನ ಹೋರಾಟದಲ್ಲಿ ಮುಖಂಡರಾದ ಸುನಂದ ಜಯರಾಂ, ಇಂಡುವಾಳು ಚಂದ್ರಶೇಖರ್, ಬೇಕ್ರಿ ರಮೇಶ್, ಕನ್ನಡಸೇನೆ ಮಂಜುನಾಥ್, ಹುರುಗಲವಾಡಿ ರಾಮಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.