ನಿವೃತ್ತ ಸೈನಿಕ ಎಸ್.ಜಯರಾಮ್ ಅವರಿಗೆ ಕೊಲೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಾಗಮಂಗಲದಲ್ಲಿ ಮಾಜಿ ಸೈನಿಕರು ಪಾದಯಾತ್ರೆ ಮಾಡುವ ಮೂಲಕ ಒತ್ತಾಯಿ ಸಿದರು.
ನಾಗಮಂಗಲ ಪಟ್ಟಣದ ಟಿ.ಬಿ ವೃತ್ತದಿಂದ ಮಿನಿವಿಧಾನಸೌಧದವರಿಗೆ ರಾಜ್ಯದ ಮಾಜಿ ಸೈನಿಕರು ಪಾದಯಾತ್ರೆ ಮಾಡಿ ಮಿನಿ ವಿಧಾನಸೌಧ ಮುಂಭಾಗ ಇರುವ ಗಾಂಧಿ ಪ್ರತಿಮೆ ಬಳಿ ದುಷ್ಕರ್ಮಿಗೆ ಶಿಕ್ಷೆ ಆಗುವವರೆಗೂ ಅಹೋ ರಾತ್ರಿ ಧರಣಿ ಮಾಡಲಾಗುವುದು, ಮಾಜಿ ಸೈನಿಕರಿಗೆ ನ್ಯಾಯ ನೀಡುವವರೆಗೂ ಧರಣಿ ನಿಲ್ಲಿಸುವುದಿಲ್ಲ ಎಂದರು.
ಮಾಜಿ ಸೈನಿಕ ಜಯರಾಮ್ ಅವರಿಗೆ ದೇವಲಾಪುರ ಹೆಚ್.ಎನ್.ಕಾವಲು ಬಳಿ ಜಮೀನಿದ್ದು, ಸುಮಾರು ವರ್ಷಗಳಿಂದ ಅವರೇ ಸ್ವಾಧೀನದಲ್ಲಿದ್ದಾರೆ. ಈ ಜಮೀನನ್ನು ಅತಿಕ್ರಮಿಸಲು ತುರುಬನಹಳ್ಳಿಯ ರಾಜೇಗೌಡ ಬಿನ್ ಬೋರೇಗೌಡರ ಮಗ ವಿನಯ್ ಕುಮಾರ್ ಹಾಗೂ ಸುರೇಶ್ ಎಂಬುವರು ಕೊಲೆ ಪ್ರಯತ್ನ ಮಾಡಿ ಗೂಂಡಾಗಿರಿ ಮಾಡಿದ್ದು ಸಂಬಂಧಪಟ್ಟ ಪೊಲೀಸ್ ಠಾಣೆಗೂ ದೂರು ನೀಡಿದ್ದರೂ ಇದುವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು.
ನ್ಯಾಯಕ್ಕಾಗಿ ಧರಣಿ ನಡೆಸುತ್ತಿರುವ ನಮಗೆ ರಕ್ಷಣೆ ನೀಡಬೇಕು. ಈ ಹೋರಾಟಕ್ಕೆ ಯಾರಿಂದಲೂ ತೊಂದರೆ ಆಗದಂತೆ ರಕ್ಷಣೆ ನೀಡುವ ಮೂಲಕ ನ್ಯಾಯ ಒದಗಿಸಿ ಕೊಡಬೇಕೆಂದು ಮಾಜಿ ಸೈನಿಕರು ಆಗ್ರಹಿಸಿದರು.