ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಅಧಿಕಾರ ಕಳೆದುಕೊಂಡಿದ್ದ ಸಂದರ್ಭದಲ್ಲಿ ಸಂಘಟಿತ ಹೋರಾಟದೊಂದಿಗೆ 2 ಎಂಎಲ್ಸಿ ಹಾಗೂ 6 ಎಂಎಲ್ಎ ಸ್ಥಾನಗಳನ್ನು ಗೆಲ್ಲಿಸಲು ಕಾರಣರಾದ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಬಿ ಮಲ್ಲಯ್ಯ ಒತ್ತಾಯಿಸಿದ್ದಾರೆ.
ಮಳವಳ್ಳಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಜಿಲ್ಲೆಯಲ್ಲಿ ಹಿರಿಯ ನಾಯಕರಾದ ಚಲುವರಾಯಸ್ವಾಮಿ ಅವರ ಜೊತೆಗೂಡಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಇಬ್ಬರು ಎಂಎಲ್ಸಿಗಳನ್ನು ಆಯ್ಕೆ ಮಾಡುವುದರ ಮೂಲಕ ವಿಧಾನಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳನ್ನು ಗೆಲ್ಲಿಸಿರುವುದರಿಂದ ಮಂಡ್ಯ ಜಿಲ್ಲೆಯ ಜೋಡೇತ್ತುಗಳೆಂದು ಗುರುತಿಸಿಕೊಂಡಿರುವ ಚಲುವರಾಯಸ್ವಾಮಿ ಅವರ ಜೊತೆಯಲ್ಲಿಯೇ ಪಿ.ಎಂ ನರೇಂದ್ರಸ್ವಾಮಿ ಅವರಿಗೆ ಸಚಿವಸ್ಥಾನ ಕೊಡಬೇಕೆಂದು ಆಗ್ರಹಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಭದ್ರಕೋಟಿ ಯನ್ನು ಛಿದ್ರಗೊಳಿಸಿ ಕಾಂಗ್ರೆಸ್ನ ಐವರು ಅಭ್ಯರ್ಥಿಗಳು ಹಾಗೂ ಓರ್ವ ರೈತ ಸಂಘದ ಅಭ್ಯರ್ಥಿ ಸೇರಿದಂತೆ ಆರು ಮಂದಿ ಗೆಲುವಿನಲ್ಲಿ ಜೋಡೆತ್ತುಗಳಂತೆ ನರೇಂದ್ರಸ್ವಾಮಿ ಹಾಗೂ ಚಲುವರಾಯಸ್ವಾಮಿ ಅವರು ಶ್ರಮಿಸಿದ್ದಾರೆ. ಅದರಲ್ಲೂ 46 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿರುವ ಪ್ರಭಾವಿ ನಾಯಕ ಜಿಲ್ಲೆಯ ಅಭಿವೃದ್ದಿ ಬಗ್ಗೆ ಹಲವು ಯೋಜನೆಗಳ ಚಿಂತನೆಗಳನ್ನು ಒಳಗೊಂಡಿರುವ ಪಿ.ಎಂ. ನರೇಂದ್ರಸ್ವಾಮಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಪಕ್ಷದ ಹೈಕಮಾಂಡನ್ನು ಆಗ್ರಹಿಸಿದರು .
ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರವರು ಜೋಡೆತ್ತುಗಳ ರೀತಿಯಲ್ಲಿ ರಾಜ್ಯ ಸರ್ಕಾರವನ್ನು ರಚಿಸುತ್ತಿರುವ ರೀತಿಯಲ್ಲಿ ಜಿಲ್ಲೆಯಲ್ಲಿ ಚಲುವರಾಯಸ್ವಾಮಿ ಹಾಗೂ ನರೇಂದ್ರಸ್ವಾಮಿ ಅವರು ಜೋಡೆತ್ತುಗಳಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಅಭಿವೃದ್ದಿಗಾಗಿ ಹಾಗೂ ಕಾಂಗ್ರೆಸ್ ಪಕ್ಷದ ಭವಿಷತ್ನ ದೃಷ್ಠಿಯಲ್ಲಿ ಚಲುವರಾಯಸ್ವಾಮಿ ಹಾಗೂ ಪಿ.ಎಂ ನರೇಂದ್ರಸ್ವಾಮಿ ಇಬ್ಬರಿಗೂ ಸಚಿವ ಸ್ಥಾನ ನೀಡಿ ಪಕ್ಷವನ್ನು ಉಳಿಸಬೇಕೆಂದು ಕೋರಿದರು.
ಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ನಿರ್ದೇಶಕ ಲಿಂಗರಾಜು, ಪುರಸಭೆ ಮಾಜಿ ಸದಸ್ಯ ಕಿರಣ್ಶಂಕರ್, ಧನಜಂಯ, ಗಂಗೇರಾಜೇ ಆರಸ್, ಶಿವಣ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.