ಮಿಮ್ಸ್ ನ ಅಕ್ರಮಗಳ ಕುರಿತು ಲೋಕಾಯುಕ್ತಕ್ಕೆ ನೀಡಿರುವ ದೂರುಗಳನ್ನು ಹಿಂಪಡೆಯುವಂತೆ ಕೊಲೆ ಬೆದರಿಕೆಯೊಡ್ಡಿದ ರೌಡಿಗಳನ್ನು ಬಂಧಿಸುವಂತೆ ಕಾರ್ಮಿಕ ನಾಯಕ ನಾಗಣ್ಣಗೌಡರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಎಸ್ಪಿ ಯತೀಶ್ ಅವರಿಗೆ ಪೌರಕಾರ್ಮಿಕ ಸಂಘಟನೆ ಮನವಿ ಸಲ್ಲಿಸಿತು.
ಮಂಡ್ಯ ನಗರದ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಬಳಿ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು, ಮೆಡಿಕಲ್ ಕಾಲೇಜಿನ ಹಲವು ಅವ್ಯವಸ್ಥೆಗಳ ವಿರುದ್ದ ಹೊರಗುತ್ತಿಗೆ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣ ಗೌಡರು ಕಳೆದ ಎರಡು ದಶಕಗಳಿಂದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಇವರ ಹೋರಾಟದ ಫಲವಾಗಿ ಜಿಲ್ಲಾಸ್ಪತ್ರೆಯ ಆರೋಗ್ಯ ಸೇವೆ ಸುಧಾರಣೆ ಯಾಗಿದೆ.ಇಲ್ಲಿನ ಕಾರ್ಮಿಕರು ಕನಿಷ್ಟ ವೇತನ ಉದ್ಯೋಗ ಭದ್ರತೆ ಪಡೆಯಲು ಸಾಧ್ಯವಾಗಿದೆ ಎಂದರು.
ಸುಳ್ಳು ದಾಖಲೆ ನೀಡಿ ಮಂಡ್ಯ ಮಿಮ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಹೊರಗುತ್ತಿಗೆ ಪಡೆದಿರುವ ಆರ್ ಅಂಡ್ ಆರ್ ಏಜೆನ್ಸಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಇಎಂಡಿ ಹಣ ಮುಟ್ಟು ಗೋಲು ಹಾಕಿಕೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾ ಯಿಸಿದರು.
ಅಕ್ರಮದ ಅರಿವಿದ್ದು ದಾಖಲೆಗಳ ಪರೀಶೀಲನೆ ನಡೆಸದೆ ಅಕ್ರಮದಲ್ಲಿ ಭಾಗೀಯಾಗಿರುವ ಮಿಮ್ಸ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸ ಬೇಕು.ರಾಮನಗರ, ಮಂಡ್ಯ, ಬೆಂಗಳೂರು ನಗರಗಳಲ್ಲಿ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ವಿಜಿ ಹಾಗೂ ಹನಕೆರೆ ಕಿರಣ್ ಅವರನ್ನು ಕೋಕಾ ಕಾಯ್ದೆಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರ ಮುಖಂಡರಾದ ನಾಗರಾಜು, ಮಂಜುನಾಥ್, ಲಿಂಗುಮಯ್ಯ, ಮಹದೇವ್, ಗೌರಮ್ಮ ಸೇರಿದಂತೆ ಹಲವರಿದ್ದರು.