ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಅವರ ಜನ್ಮದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವು ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು ಅವರಿಗೆ ಕಲ್ಕುಣಿ ಗ್ರಾಮಸ್ಥರು, ಯುವಕ ಮಿತ್ರರು ಹಾಗೂ ಕಾಂಗ್ರೆಸ್ ಮುಖಂಡರು ಜನ್ಮದಿನದ ಶುಭಾಶಯ ಕೋರಿ ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ದೇವರಜು, ನನ್ನ ಹುಟ್ಟುಹಬ್ಬದ ಅಂಗವಾಗಿ ಕಲ್ಕುಣಿ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ತುಂಬ ಉಪಯೋಗವಾಗುವಂತಹ ರಕ್ತದಾನ ಶಿಬಿರ ಆಯೋಜಿಸಿರುವುದು ಸಂತೋಷದ ಸಂಗತಿಯಾಗಿದ್ದು,ತಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದು ತಿಳಿಸಿದರು.
ಜೀವಧಾರೆ ಟ್ರಸ್ಟ್ ನಟರಾಜು ಮಾತನಾಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೇವರಾಜು ಅವರ ಹುಟ್ಟು ಹಬ್ಬದ ಅಂಗವಾಗಿ ಯುವಕರು ಕೃತಕವಾಗಿ ತಯಾರಿಸಲು ಸಾಧ್ಯವಾಗದ ಹಾಗೂ ಮನುಷ್ಯ ಜಾತಿ ಒಂದೇ ಎಂದು ಸಾರುವ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಿರುವುದು ಉತ್ತಮ ಬೆಳೆವಣಿಗೆಯಾಗಿದೆ.
ದೇವರಾಜು ಅವರು ರಕ್ತದಾನ ಶಿಬಿರಕ್ಕೆ ಬೇಕಾದ ಆಗತ್ಯ ಮೂಲಭೂತ ಸೌಲಭ್ಯಗಳನ್ನು ನೀಡಿ ಯಶಸ್ವಿಗೊಳಿಸಲು ಸಹಕಾರ ನೀಡಿದ್ದಕ್ಕೆ ಅಭಿನಂದನೆಯನ್ನು ಸಲ್ಲಿಸುವುದಾಗಿ ಹೇಳಿದರು.
ಮಂಡ್ಯ ಮಿಮ್ಸ್ ರಕ್ತನಿಧಿ ಕೇಂದ್ರ ವೈದ್ಯಾಧಿಕಾರಿ ಯೋಗೇಂದ್ರ ಪಾಟವಾರಿ ಮಾತನಾಡಿ, ತಮ್ಮ ರಕ್ತದ ಮೂಲಕ ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಶಿಬಿರಗಳು ಹುಟ್ಟು ಹಬ್ಬ ಮತ್ತು ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ನಡೆಯಬೇಕು, ರಕ್ತ ದಾನ ಶಿಬಿರ ನಡೆಸುತ್ತಿರುವ ಕಲ್ಕುಣಿ ಗ್ರಾಮದ ಯುವಕರಿಗೆ ಹಾಗೂ ದೇವರಾಜು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕಲ್ಕುಣಿ ಗ್ರಾಮದಲ್ಲಿ ಕೇಕ್ ಕತ್ತರಿಸುವುದರ ಮೂಲಕ ದೇವರಾಜು ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.ಗ್ರಾಮಸ್ಥರು,
ಯುವಕರು ಹಾಗೂ ಕಾಂಗ್ರೆಸ್ ಮುಖಂಡರು ಹುಟ್ಟು ಹಬ್ಬದ ಶುಭಾಶಯ ಕೋರಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಪರಮೇಶ್, ಮುಖಂಡರಾದ ಚಂದ್ರಶೇಖರ್ ದಿಲೀಪ್, ಪ್ರಸನ್ನ, ಪ್ರಕಾಶ್,ಶೀನಪ್ಪ, ಕುಮಾರ್, ಶಿವಕಾಳಯ್ಯ,ಶಾಂತರಾಜು, ಸೇರಿದಂತೆ ಇತರರಿದ್ದರು.