ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷರಾದ ವಿ.ಎಸ್.ಧನಂಜಯ ಕುಮಾರ್ ಅವರು ಫೆಬ್ರವರಿ ಮೊದಲ ವಾರದಲ್ಲಿ ತಾವು ಜೆಡಿಎಸ್ ಪಕ್ಷಕ್ಕೆ ತಮ್ಮ ಸಾವಿರಾರು ಬೆಂಬಲಿಗ ರೊಂದಿಗೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.
ಕೆ.ಆರ್.ಪೇಟೆ ಪಟ್ಟಣದ ಹೊರವಲಯದಲ್ಲಿರುವ ಚೌಡೇಶ್ವರಿ ದೇವಾಲಯದ ಸಮುದಾಯದ ಭವನದಲ್ಲಿ ಸಮುದಾಯದ ಹಿರಿಯರು, ಇತರ ಸಮಾಜದ ಮುಖಂಡರು ಹಾಗೂ ಸ್ನೇಹಿತರು, ಹಿತೈಷಿಗಳು ಹಾಗೂ ಅಪಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ವಿ.ಎಸ್.ಧನಂಜಯಕುಮಾರ್, ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕ ಪ್ರದೇಶ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಜಾನಕೀರಾಂ ಹಾಗೂ ತಾಲ್ಲೂಕು ಜೆಡಿಎಸ್ ಅಭ್ಯರ್ಥಿ ಹೆಚ್.ಟಿ.ಮಂಜು ಹಾಗೂ ಸೇರಿದಂತೆ ಜಿಲ್ಲಾ ಹಾಗೂ ರಾಜ್ಯ ಜೆಡಿಎಸ್ ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತೇನೆ ಎಂದು ಘೋಷಿಸಿದರು.
ಮುಂಬರುವ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವ ಮೂಲಕ ನನ್ನ ಶಕ್ತಿಯನ್ನು ತೋರಿಸುತ್ತೇನೆ. ನಮ್ಮ ವೀರಶೈವ ಲಿಂಗಾಯಿತ ಬಂಧುಗಳು ಕಳೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಮೇಲಿನ ಪ್ರೀತಿ ಮತ್ತು ವಿಶ್ವಾಸದಿಂದ ಸಮಾಜಕ್ಕೆ ಏನಾದರೂ ಅನುಕೂಲವಾಗಬಹುದು, ಲಿಂಗಾಯಿತರಿಗೆ ಸಮುದಾಯ ಭವನ, ವಿದ್ಯಾರ್ಥಿ ನಿಲಯ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತವೆ ಎಂಬ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡು ಬಿಜೆಪಿ ಪಕ್ಷಕ್ಕೆ ಸಾರಾಸಗಟಾಗಿ ಮತ ನೀಡಿದರು. ಆದರೆ ಚುನಾವಣೆಯಲ್ಲಿ ಜಯಗಳಿಸಿದ ನಾರಾಯಣಗೌಡರು ಸಚಿವರೂ ಆಗಿ ಮೂರು ವರ್ಷಗಳು ಕಳೆದರೂ ನಮ್ಮ ಸಮುದಾಯಕ್ಕೆ ಯಾವುದೇ ಉಪಯೋಗವಾಗುವಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿಲ್ಲ ಎಂದು ದೂರಿದರು.
ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಲಯಗಳಿಗೆ ಯಡಿಯೂರಪ್ಪ ಅವರು ಬಿಡುಗಡೆ ಮಾಡಿದ್ದ ಅನುಧಾನ ವ್ಯರ್ಥವಾಗುತ್ತಿದೆ. ಇಂತಹ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ನಮ್ಮ ಲಿಂಗಾಯಿತ ಸಮುದಾಯದ ಸುಮಾರು 20ಸಾವಿರ ಮಂದಿಗೆ ಭ್ರಮನಿರಸನವಾಗಿದೆ. ಈ ಹಿನ್ನೆಲೆಯಲ್ಲಿ ನನ್ನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಡಿಸುವ ಹಿನ್ನೆಲೆಯಲ್ಲಿ ತಾವು ಜೆಡಿಎಸ್ ಪಕ್ಷವನ್ನು ಸೇರುವ ನಿರ್ಧಾರ ಮಾಡಿದ್ದೇನೆ ಎಂದು ನ್ಯಾಯವಾದಿಗಳು ಆಗಿರುವ ವಿ.ಎಸ್.ಧನಂಜಯಕುಮಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಕೃಷ್ಣರಾಜಪೇಟೆ ಟೌನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ.ಬಸವೇಗೌಡ, ನಿವೃತ್ತ ಸೈನಿಕ ಸುಕುಮಾರ್, ಎಲ್ ಐ ಸಿ ಶಿವಪ್ಪ, ಮಾಕವಳ್ಳಿ ನಾಗೇಶ್, ಬಂಡಿಹೊಳೆ ಕೃಷ್ಣಮೂರ್ತಿ, ತಾಲ್ಲೂಕು ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಹರಿಹರಪುರ ನರಸಿಂಹ, ಟೌನ್ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಅಂಬೇಡ್ಕರ್ ನಗರ ಗಣೇಶ್, ಪುರಸಭಾ ಮಾಜಿ ಸದಸ್ಯ ಹೊಸಹೊಳಲು ಗಂಟೆ ಗೋಪಾಲ್, ಸುರೇಶ್, ಯೋಗೇಶ್ ಸೇರಿದಂತೆ ನೂರಾರು ಬೆಂಬಲಿಗರು ಹಾಗೂ ಹಿತೈಷಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.