ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮರಿತಿಬ್ಬೇಗೌಡರು, ಕಳೆದ 24 ವರ್ಷಗಳಿಂದ ಸದನದ ಒಳಗೆ ಹಾಗೂ ಹೊರಗೆ ಶಿಕ್ಷಕರ, ರೈತರ ಹಾಗೂ ಧ್ವನಿ ಇಲ್ಲದವರ ಪರವಾಗಿ ನಿರಂತರವಾಗಿ ಹೋರಾಟವನ್ನು ಮಾಡಿಕೊಂಡು ಬಂದಿದ್ದು,ಅವರಿಗೆ ಈ ಬಾರಿಯೂ ಅವಕಾಶ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ ಶಾಸಕರಾದ ದಿನೇಶ್ ಗೂಳಿಗೌಡ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಮರಿತಿಬ್ಬೇಗೌಡರು ಶಿಕ್ಷಕರು,ರೈತರ ಪರವಾಗಿ ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಅಲ್ಲದೆ ಮಂಡ್ಯದಲ್ಲಿ ಮೈಶುಗರ್ ಕಾರ್ಖಾನೆ ಮರು ಪ್ರಾರಂಭ ಆಗುವುದರ ಹಿಂದೆ ಇವರ ಸಿಂಹಪಾಲು ಇದೆ. ರೈತರಿಗೆ ಕಾಲ ಕಾಲಕ್ಕೆ ಹಣ ಪಾವತಿಯಾಗಬೇಕು. ಜೊತೆಗೆ ಹೊಸ ಕಾರ್ಖಾನೆ ಸ್ಥಾಪನೆಯಾಗಬೇಕು ಎಂದು ಸದನದಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ ಎಂದು ಹೇಳಿದರು.
ಧ್ವನಿ ಎತ್ತುವ ನಾಯಕ
ಇದೆಲ್ಲದರ ಜೊತೆಗೆ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವೇ ಇರಬಹುದು, ವೈದ್ಯಕೀಯ ಶಿಕ್ಷಣ ಇರಬಹುದು, ತಾಂತ್ರಿಕ ಶಿಕ್ಷಣ ಇರಬಹುದು, ಪಾಲಿಟೆಕ್ನಿಕ್’ಗೆ ಸಂಬಂಧಪಟ್ಟಂತೆ ಇರಬಹುದು, ಈ ರೀತಿಯ ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರ, ಉಪನ್ಯಾಸಕ ವರ್ಗದ, ವಿದ್ಯಾರ್ಥಿಗಳ ಪರವಾಗಿ ವಿಧಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ ಎಂದರು.
5ನೇ ಬಾರಿಗೆ ಆಯ್ಕೆ ಮಾಡಲು ಮನವಿ
ಶಿಕ್ಷಕ ಬಂಧುಗಳು ಇಂತಹ ಒಬ್ಬ ಪ್ರತಿನಿಧಿಯನ್ನು ಪಡೆಯಲು ಹೆಮ್ಮೆ ಪಡಬೇಕು. ಮರಿತಿಬ್ಬೇಗೌಡರು, ನಿಮ್ಮೆಲ್ಲರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಾರೆ. ಹೀಗಾಗಿ ಶಿಕ್ಷಕ ಬಂಧುಗಳು ಅವರ ಕೈ ಹಿಡಿಯಬೇಕು.
ಜೂನ್ 3 ರಂದು ಚುನಾವಣೆ ನಡೆಯಲಿದ್ದು, ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ ಸೇರಿ 4 ಜಿಲ್ಲೆಗಳ ಶಿಕ್ಷಕರು ಸಮಯೋಚಿತವಾಗಿ ಚಿಂತಿಸಿ ಐದನೇ ಬಾರಿಗೆ ಮರಿತಿಬ್ಬೇಗೌಡ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಅಭ್ಯರ್ಥಿ ಮರಿತಿಬ್ಬೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಡಿ.ಗಂಗಾಧರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ, ನಗರಸಭೆ ಸದಸ್ಯ ಶ್ರೀಧರ್ ಹಾಗೂ ಶಿಕ್ಷಣ ಪ್ರತಿನಿಧಿಗಳು ಇದ್ದರು.