ಇತ್ತೀಚಿನ ದಿನಗಳಲ್ಲಿ ಯಾಂತ್ರಿಕ ಬದುಕಿನಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ವಿಷಾದಿಸಿದರು.
ಮಂಡ್ಯ ನಗರದ ಕಾಳಪ್ಪ ಬಡಾವಣೆಯಲ್ಲಿ(ಆರ್ಟಿಒ ಸ್ಲಂ) ನೆಲದನಿ ಬಳಗವು ಆಯೋಜಿಸಿದ್ದ ಬಡಾವಣೆ ನಿವಾಸಿಗಳಿಗೆ ಸೊಪ್ಪು-ತರಕಾರಿ, ಹಣ್ಣುಗಳ ವಿತರಣೆಯ ಸಾಮಾಜಿಕ ಕರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲಸದ ಒತ್ತಡ ಮತ್ತು ಬದುಕಿನ ಜಂಜಾಟದಿಂದ ಜೀವನಾನುಭವದ ಖುಷಿಯನ್ನೇ ಕಳೆದುಕೊಂಡಿದ್ದೇವೆ ಎಂದು ಹೇಳಿದರು.
ಕೆಲಸದ ಒತ್ತಡದಿಮದಾಗಿ ನಮ್ಮ ಆಲೋಚನೆಗಳು ಸೀಮಿತಗೊಳ್ಳುತ್ತಿರುತ್ತವೆ. ಆದರೆ, ಸಾಮಾನ್ಯ ಜನರು, ಬಡವರ ನಡುವೆ ಕೆಲಸ ಮಾಡುವ ಇಂತಹ ಸಂದರ್ಭ ಸೃಷ್ಟಿಸಿದರೆ ನಮಗೂ ಹಾಗೂ ಎದುರು ಇರುವವರಿಗೂ ಹೊಸ ಪರಿವರ್ತನೆಗೆ, ಹೊಸ ಆಲೋಚನೆಗಳ ಸೃಷ್ಟಿಗೆ ಅನುಕೂಲವಾಗಿದೆ. ನನ್ನ ಹುಟ್ಟು ಹಬ್ಬದ ಅಂಗವಾಗಿ ನೆಲದನಿ ಬಳಗವು ಇಂತಹುದೊಂದು ವಿಶೇಷ ಕರ್ಯಕ್ರಮ ಆಯೋಜಿಸಿ ಜನರ ನಡುವೆ ನನ್ನನ್ನು ಕರೆತಂದಿರುವುದು ಖುಷಿಯಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಆಶ್ರಮದ ಪೀಠಾಧ್ಯಕ್ಷ ಶ್ರೀನಾದಾನಂದನಾಥ ಸ್ವಾಮೀಜಿ ಮಾತನಾಡಿ, ಪ್ರತಿಷ್ಠಿತ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಬದಲು ಬಡವರು ವಾಸಿಸುವ ಇಂತಹ ಸ್ಥಳಗಳಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಅರ್ಥಗರ್ಭಿತವಾಗಿದೆ. ಜೀವನದಲ್ಲಿ ಏನಾದರೂ ಸಾಧಿಸಿದಾಗ ಸಮಾಜದಲ್ಲಿ ಉನ್ನತ ಗೌರವ ಸಿಗುತ್ತದೆ. ಅಂತಹ ಗೌರವಕ್ಕೆ ಡಾ.ಎಚ್.ಎಲ್.ನಾಗರಾಜು ಪಾತ್ರರಾಗಿದ್ದಾರೆ. ಜನರ ನಡುವೆ ಸದಾ ಉಳಿಯುವ ವ್ಯಕ್ತಿತ್ವ ಇವರದ್ದಾಗಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಕಾಳಪ್ಪ ಬಡಾವಣೆಯ ನಿವಾಸಿಗಳಿಗೆ ಉಚಿತವಾಗಿ ಸೊಪ್ಪು-ತರಕಾರಿ, ಹಣ್ಣುಗಳ ವಿತರಿಸಲಾಯಿತು. ಸಮಾರಂಭದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಗ್ರಾ.ಪಂ. ಸದಸ್ಯ ಎಂ.ಸಿ.ಕುಮಾರಗೌಡ, ಮಿಮ್ಸ್ ವೈದ್ಯ ಡಾ.ಚೇತನ್, ನೆಲದನಿ ಬಳಗದ ಪೋಷಕಿ ರುಕ್ಮಿಣಿ ಶಂಕರೇಗೌಡ, ಅಧ್ಯಕ್ಷ ಎಂ.ಸಿ.ಲAಕೇಶ್, ಪದಾಧಿಕಾರಿಗಳಾದ ಎಂ.ಸಿ.ಕುಮಾರಗೌಡ, ಅನಿತಾ ಹರೀಶ್, ಪವಿತ್ರ ಸತೀಶ್, ಮಂಜು ತಗ್ಗಹಳ್ಳಿ, ಮಹದೇವಸ್ವಾಮಿ, ಜಿ.ಎನ್.ಕೆಂಪರಾಜು, ವೈರಮುಡಿ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ವಿನಯ್ಕುಮಾರ್, ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು, ಸುಬ್ರಮಣ್ಯ, ಪೂರ್ಣಿಮಾ, ಲಯನ್ಸ್ ಸಂಸ್ಥೆಯ ಬಿ.ಎಂ.ಅಪ್ಪಾಜಪ್ಪ ಇತರರು ಭಾಗವಹಿಸಿದ್ದರು.