ರಾಜ್ಯಕ್ಕೆ ಬಂದಿಳಿದಿರುವ ಅಮಿತ್ ಶಾ ಇಂದು (ಶುಕ್ರವಾರ) ಮಧ್ಯಾಹ್ನ ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಸಾವರ್ಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅವರ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಣ ಬಳಸಲಾಗಿದೆ ಎಂದು ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ವಾದಿ) [ಸಿಪಿಐಎಂ] ಆರೋಪಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಟಿ.ಎಲ್, “ಅಮಿತ್ ಶಾ ಕಾರ್ಯಕ್ರಮಕ್ಕೆ ಜನ ಕರೆ ತರಲು, ಹಣ ವೆಚ್ಚ ಮಾಡುವಂತೆ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮನ್ಮುಲ್ ಒತ್ತಡ ಹಾಕುತ್ತಿದೆ. ಮನ್ಮುಲ್ನ ಜನವಿರೋಧಿ ನಡವಳಿಕೆ ಖಂಡನೀಯ. ಯಾವುದೇ ಕಾರಣಕ್ಕೂ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘದ ಹಣ ಬಳಸಬಾರದು. ಮನ್ಮುಲ್ ನಡೆಯನ್ನು ಪ್ರತಿ ಷೇರುದಾರರು ವಿರೋಧಿಸಬೇಕು” ಎಂದು ಕರೆ ನೀಡಿದ್ದಾರೆ.
“ಬಿಜೆಪಿ ರಾಜಕೀಯಕ್ಕಾಗಿ ಸಹಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಬೇಕು. ರೈತರಿಗೆ ಉತ್ಪಾದನಾ ವೆಚ್ಚ ಭರಿಸುವ, ಹಾಲು ಖರೀದಿ ದರ ನೀಡಲು ಕೂಡ ಸಾಧ್ಯವಾಗದೇ ಇರುವ ಮನ್ಮುಲ್ ಸಂಸ್ಥೆಯ ಹಣವನ್ನು ಈ ರೀತಿ ದುರುಪಯೋಗ ಮಾಡುವುದು ರೈತ ವಿರೋಧಿಯಾಗಿದೆ” ಎಂದು ಪಕ್ಷವು ಹೇಳಿದೆ.
“ಬೇಕಾದರೆ ರಾಜಕೀಯ ಪಕ್ಷಗಳಲ್ಲೇ ಅತ್ಯಂತ ಶ್ರಿಮಂತವಾಗಿರುವ ಬಿಜೆಪಿ, ಜನರನ್ನು ಕರೆತರಲು ಚುನಾವಣಾ ಬಾಂಡ್ಗಳ ಮೂಲಕ ಅಕ್ರಮವಾಗಿ ಸಂಗ್ರಹಿಸಿರುವ ಸಹಸ್ರಾರು ಕೋಟಿ ಹಣವನ್ನೇ ಖರ್ಚು ಮಾಡಲಿ. ಬಿಜೆಪಿಯ ಖಯಾಲಿಗೆ ಬಡ ಹಾಲು ಉತ್ಪಾದಕರ ಹಣವನ್ನು ವ್ಯಯ ಮಾಡುವುದು ಬೇಡ” ಎಂದು ಸಿಪಿಐಎಂ ಹೇಳಿದೆ.