Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವಿಷನ್ ಮಂಡ್ಯ : ಜಯರಾಂ ರಾಯಪುರ

ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಆಗಬೇಕಿರುವ ಸರ್ವಾಂಗೀಣ ಅಭಿವೃದ್ಧಿಗೆ ವಿಷನ್ ಮಂಡ್ಯ ಯೋಜನೆ ರೂಪಿಸಿ ಹಕ್ಕೊತ್ತಾಯ ಮಾಡಲಾಗುವುದು. ಹೊಸ ಆಲೋಚನೆಯೊಂದಿಗೆ ಸರ್ಕಾರಿ ವ್ಯವಸ್ಥೆ ಹಾಗೂ ಖಾಸಗಿ ವಲಯದಲ್ಲಿ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಕೃಷಿಗೆ ಹೊಸ ಆಯಾಮ, ಪ್ರವಾಸೋದ್ಯಮಕ್ಕೆ ಉತ್ತೇಜನೆ ನೀಡಿ ಉದ್ಯೋಗಗಳ ಸೃಷ್ಟಿಯ ಬಗ್ಗೆ ಯೋಜನೆ ರೂಪಿಸಿ ಮಂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಹೇಳಿದರು.

ಮಂಡ್ಯ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ `ಮಂಡ್ಯ ಮುನ್ನಡೆ’ ಕಾರ್ಯಕ್ರಮದ ಸಭೆಯಲ್ಲಿ‌ ಭಾಗವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಮೂಲ ನಿವಾಸಿಗಳು ಬೇರೆ ಜಿಲ್ಲೆ, ರಾಜ್ಯ ಹಾಗೂ ದೇಶಗಳಲ್ಲಿ ವಾಸವಾಗಿದ್ದು, ಅವರಿಗೆ ಮಂಡ್ಯ ಜಿಲ್ಲೆಯ ಮೇಲೆ ಇರುವ ಅಭಿಮಾನ, ಅಭಿವೃದ್ಧಿಯ ದೃಷ್ಟಿಕೋನ ಹಾಗೂ ವಿಶ್ವಾಸವನ್ನು ‌ಪಡೆದುಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲು ಸಮಾಗಮ ಸಮಲೋಚನೆ ಹಾಗೂ‌ ಸಮರ್ಪಣೆಯ ಕೆಲಸವಾಗಬೇಕಿದೆ ಎಂದರು.

ಮೈಸೂರು ಮತ್ತು ಬೆಂಗಳೂರು ಮಧ್ಯೆ ಇರುವ ಮಂಡ್ಯ ಜಿಲ್ಲೆಯಲ್ಲಿ ಪೂರಕ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಜಿಲ್ಲೆಯ ಅಭಿವೃದ್ಧಿಗೆ ಬೇಕಿರುವ ಯೋಜನೆಗಳು ಮತ್ತು ಕ್ಷೇತ್ರಗಳನ್ನು ಗುರುತಿಸಿ, ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಳ್ಳಲು ಮುನ್ನಡೆ ಮಂಡ್ಯ ಎಂಬ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಸಭೆಯಲ್ಲಿ ಚರ್ಚಿಸಿರುವ ವಿಷಯಗಳ ಬಗ್ಗೆ ವಿಷನ್ ಡಕ್ಯೂಮೆಂಟ್ ಸಿದ್ಧಪಡಿಸಿ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ದಿಕ್ಸೂಚಿ ನೀಡಲಾಗುವುದು ಎಂದರು.

ಮಂಡ್ಯ ಜಿಲ್ಲೆಯು ಕರ್ನಾಟಕ ರಾಜ್ಯ, ಭಾರತ ದೇಶ ಹಾಗೂ ವಿಶ್ವದ ಅವಿಭಾಜ್ಯ ಭಾಗವಾಗಿ ಗುರುತಿಸಿಕೊಳ್ಳುವ ರೀತಿಯ ಎಲ್ಲಾ ಅವಕಾಶಗಳಿವೆ. ಪ್ರವಾಸೋದ್ಯಮಕ್ಕೆ ಎಲ್ಲಾ ತಾಲ್ಲೂಕುಗಳಲ್ಲಿ ಸರ್ಕೂಟ್ ರಚಿಸಬಹುದು. ಮುನ್ನಡೆ ಮಂಡ್ಯ ಎಂಬ ಕಚೇರಿಯನ್ನು ತೆರೆದು, ಕೆಲವೇ ತಿಂಗಳಲ್ಲಿ ಆಗಬಹುದಾದ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸಾರ್ವಜನಿಕರನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಗುವುದು. ಮುನ್ನಡೆ ಮಂಡ್ಯ ಕಾರ್ಯಕ್ರಮಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಎಲ್ಲರನ್ನು ತೊಡಗಿಸಿಕೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ಹೆಚ್.ಎನ್.ಗೋಪಾಲ ಕೃಷ್ಣ ಮಾತನಾಡಿ, ಮುನ್ನಡೆ ಮಂಡ್ಯಕ್ಕೆ ಸ್ವಯಂ ಸೇವಾ ಸಂಸ್ಥೆ ಹಾಗೂ ಯುವ ಶಕ್ತಿ ಅತ್ಯಂತ ಮುಖ್ಯ. ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆಯಡಿ ಗ್ರಾಮ ಪಂಚಾಯತಿಗಳಲ್ಲಿ ಯುವ ಸಂಘಗಳನ್ನು ರಚಿಸಲಾಗಿದೆ.  ಇವರೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಿ ಉತ್ತಮವಾಗಿ ಯೋಜನೆ ಅನುಷ್ಠಾನವಾಗಬೇಕಿದೆ ಎಂದರು.

ಜಿ.ಪಂ. ಸಿಇಓ ಶಾಂತ ಎಲ್.ಹುಲ್ಮನಿ ಮಾತನಾಡಿ, ನಮ್ಮಲ್ಲಿ ಬಹಳಷ್ಟು ಮಹಿಳಾ ಸಂಘಗಳು ಬಹಳಷ್ಟು ವಿಧದ ವಸ್ತುಗಳು ಹಾಗೂ ಆಹಾರವನ್ನು ಉತ್ಪಾದಿಸುತ್ತಿದ್ದಾರೆ. ಅವರಿಗೆ ಮಾರುಕಟ್ಟೆ ವ್ಯವಸ್ಥೆಯಾಗಬೇಕು. ಈ ಕುರಿತಂತೆ ವಿಸ್ತಾರವಾದ ವರದಿ ಸಲ್ಲಿಸುತ್ತೇನೆ ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್ ನಾಗರಾಜು ಮಾತನಾಡಿ, ಕೆ.ಆರ್.ಪೇಟೆ, ನಾಗಮಂಗಲ ಭಾಗದಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಅವಕಾಶವಿದೆ. ಉತ್ತಮ ನೀರಾವರಿ ವ್ಯವಸ್ಥೆ ಇರುವ ಜಿಲ್ಲೆಯ ಕೆಲವು ಭಾಗಗಳಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಇಂತಹ ವಿಷಯಗಳನ್ನು ಮುನ್ನಡೆ ಮಂಡ್ಯದಲ್ಲಿ ತೆಗೆದುಕೊಂಡು ಅಭಿವೃದ್ಧಿ ಪಡಿಸಬೇಕು ಎಂದರು.

ಸಭೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಮೈಸೂರಿನ ನೇಗಿಲ ಯೋಗಿ ಸಂಸ್ಥೆಯ ಅಧ್ಯಕ್ಷ ರವಿಕುಮಾರ್, ಮಂಡ್ಯ ನೇಗಿಲ ಯೋಗಿ ಸಂಸ್ಥೆಯ ಅಧ್ಯಕ್ಷ ಎ.ಸಿ.ರಮೇಶ್, ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು, ಸುರೇಂದ್ರ  ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!