ಮಂಡ್ಯ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ 1 ವರ್ಷ 2 ತಿಂಗಳಿನ ಮಗು ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಪಾಂಡವಪುರ ತಾಲ್ಲೂಕಿನ ನ್ಯಾಮನಹಳ್ಳಿ ಗ್ರಾಮದ ಚನ್ನಕೇಶವ ಎಂಬುವವ ಪುತ್ರಿ ಕೀರ್ತನಾ ಸಾವಿಗೀಡಾದ ಮಗುವಾಗಿದೆ.
ಶನಿವಾರ ಮುಂಜಾನೆ ಮಗುವಿನ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಬೆಳಗ್ಗಿನ ಜಾವ 4.15 ರ ಸುಮಾರಿಗೆ ಪೋಷಕರು ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆ ಸಂದರ್ಭದಲ್ಲಿ ಇಂಟರ್ ಶಿಪ್ ನಲ್ಲಿದ್ದ ಡಾ.ಪಾಗಲವಂ ಹಾಗೂ ರೆಸಿಡೆಂಟ್ ವೈದ್ಯರಾದ ಡಾ.ಶ್ರುತಿ ಎಂಬುವರು ಮಗುವಿಗೆ ಚಿಕಿತ್ಸೆ ನೀಡಿದರು. ಅನಂತರ ಮತ್ತೊಬ್ಬ ರೆಸಿಡೆಂಟ್ ವೈದ್ಯ ಡಾ.ನಿಶ್ಚಲ್ ಎಂಬುವರು ಚಿಕಿತ್ಸೆ ನೀಡಿದರು. ಅನಂತರ ಮಗು ಮೃತಪಟ್ಟಿತು ಎಂದು ಪೋಷಕರು ದೂರಿದ್ದಾರೆ.
ಮೂವರು ವೈದ್ಯಕೀಯ ವಿದ್ಯಾರ್ಥಿಗಳ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣವಾಗಿದೆ ಎಂದು ಮಗುವಿನ ಪೋಷಕರು ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.