Thursday, September 19, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಈಶ್ವರಪ್ಪ ಬಂಧಿಸಿ : ಡಿ.ಕೆ.ಶಿವಕುಮಾರ್ ಆಗ್ರಹ

ಮಾತೆತ್ತಿದರೆ ಬರೀ ಸುಳ್ಳನ್ನೇ ಹೇಳುತ್ತಾ ಬಂದಿರುವ ಸುಳ್ಳು ಕಂಪೆನಿಯ ಅಧ್ಯಕ್ಷರಾದ ಈಶ್ವರಪ್ಪ ರಾಜೀನಾಮೆ ನೀಡಿದರೆ ಸಾಲದು. ಸಂತೋಷ್ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಅವರ ಮೇಲೆ ಭ್ರಷ್ಟಾಚಾರ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

ಈಶ್ವರಪ್ಪನವರು ರಾಜೀನಾಮೆ ಘೋಷಿಸಿದ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, “ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಶೇ.40 ಕಮಿಷನ್ ಆರೋಪ ನೀಡಿದ ದಿನದಿಂದ ಆತ ಯಾರು ಎಂದೇ ನನಗೆ ಗೊತ್ತೇ ಇಲ್ಲ ಎಂದು ಈಶ್ವರಪ್ಪ ಸುಳ್ಳು ಹೇಳುತ್ತಲೇ ಇದ್ದರು. ಇಂದು ತಮ್ಮ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಜೋರಾಗಿದೆ ಎಂಬುದು ತಿಳಿದ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಅವರು ರಾಜೀನಾಮೆ ನೀಡಿದರೆ ಸಾಲದು. ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಅವರೇ ನೇರ ಕಾರಣರಾಗಿದ್ದು ಕೂಡಲೇ ಬಂಧಿಸಿ ವಿಚಾರಣೆ ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್‌‌ ಪಾಟೀಲ್‌‌ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಶಿವಮೊಗ್ಗದಲ್ಲಿ ಗುರುವಾರ ಘೋಷಿಸಿದ್ದಾರೆ.

ತಮ್ಮ ಕಾರ್ಯಕ್ಷೇತ್ರವಾದ ಶಿವಮೊಗ್ಗದಲ್ಲಿ ದಿಢೀರ್‌‌ ಸುದ್ದಿಗೋಷ್ಠಿ ಕರೆದು ಮಾತನಾಡಿರುವ ಈಶ್ವರಪ್ಪ, “ಪ್ರಕರಣದಲ್ಲಿ ನನ್ನದೇನಾದರೂ ಒಂದು ಶೇಕಡ ತಪ್ಪಿದ್ದರೂ ನನ್ನ ಮನೆ ದೇವರು ನನಗೆ ಶಿಕ್ಷೆ ನೀಡಲಿ. ನಾಳೆ ಸಂಜೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗೆ ರಾಜೀನಾಮೆ ಪತ್ರ ಸಲ್ಲಿಸುತ್ತೇನೆ” ಎಂದು ಅವರು ಹೇಳಿದ್ದಾರೆ.

“ಎಲ್ಲಾ ಕಾರ್ಯಕರ್ತರಿಗೆ ನನ್ನ ಧನ್ಯವಾದ ಅರ್ಪಿಸುತ್ತೇನೆ. ಗ್ರಾಮೀಣಾಭಿವೃದ್ದಿ ಇಲಾಖೆ ಸಿಕ್ಕಿದ್ದು ನನ್ನ ಸೌಭಾಗ್ಯ. ಇಲಾಖೆಯಲ್ಲಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಪ್ರಕರಣದಲ್ಲಿ ಯಾರಿಗೂ ಇರಿಸುಮುರಿಸು ಮಾಡಲು ಇಷ್ಟವಿಲ್ಲ. ಎಲ್ಲವನ್ನೂ ಎದುರಿಸಿ ಮುಕ್ತವಾಗಿ ಹೊರಬರುತ್ತೇನೆ. ಒಂದೇ ಒಂದು ಪರ್ಸೆಂಟ್ ತಪ್ಪಿದ್ದರೆ ಸಾಬೀತಾಗಲಿ” ಎಂದು ಹೇಳಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!