ಆಧುನಿಕ ಭಾರತ ದೇಶವನ್ನು ಕಟ್ಟುವಲ್ಲಿ ಶ್ರಮವಹಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರದು ಜಗತ್ತಿಗೆ ಮಾದರಿಯಾಗಬಲ್ಲ ವ್ಯಕ್ತಿತ್ವ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಬಣ್ಣಿಸಿದರು.
ಮಂಡ್ಯದ ಸ್ಪಂದನ ಆಸ್ಪತ್ರೆ, ರಕ್ತನಿಧಿ ಮಿಮ್ಸ್ ಹಾಗೂ ನೆಲದನಿ ಬಳಗದ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಇಂದು ನಡೆದ ರಕ್ತದಾನ ಶಿಬಿರವನ್ನು ಕುಂಚದಲ್ಲಿ ಅಂಬೇಡ್ಕರ್ ಚಿತ್ರವನ್ನು ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮಾಡುವ ಮೂಲಕ ಬಾಬಾ ಸಾಹೇಬರ ಪರಿನಿರ್ವಾಣ ದಿನ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಅಂಬೇಡ್ಕರ್ ಅವರು ಬ್ರಿಟಿಷರ ವಿರುದ್ಧದ ಸ್ವತಂತ್ರ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಅಲ್ಲದೇ ವಿಶ್ವದಲ್ಲೇ ಶ್ರೇಷ್ಠ ಸಂವಿಧಾನ ರಚನೆ ಮಾಡುವ ಮೂಲಕ ಒಂದು ದೊಡ್ಡ ಆದರ್ಶಗಳ ಕೋಶವನ್ನು ದೇಶದ ಜನರಿಗೆ ನೀಡಿದರು ಎಂದರು.
ಅಂಬೇಡ್ಕರ್ ಅವರ ಹುಟ್ಟುಹಬ್ಬ ಹೇಗೆ ವಿಶೇಷವೋ ಹಾಗೇಯೇ ಅವರ ಪರಿನಿರ್ವಾಣ ದಿನವು ವಿಶೇಷ ದಿನವಾಗಿದೆ. ಬುದ್ದನಂತೆ ಸಮಸಮಾಜದ ಕನಸು ಕಂಡ ಅವರು, ಶೋಷಣೆ ಮುಕ್ತ, ಜಾತ್ಯತೀತ, ಭಾತೃತ್ವದ ಸಮಾಜ ನಿರ್ಮಾಣದ ಕನಸು ಕಂಡಿದ್ದರು, ಅದನ್ನು ನಾವು ನನಸಾಗಿಸಲು ಶ್ರಮಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ರೈತ ನಾಯಕಿ ಸುನಂದ ಜಯರಾಂ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಧನಂಜಯ, ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ.ಆಶಾಲತಾ ಹಾಗೂ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ವೈರಮುಡಿ ಮತ್ತು ತಂಡದವರು ಅಂಬೇಡ್ಕರ್ ಗೀತೆಗಳನ್ನು ಹಾಡಿದರು.
ಶಿಬಿರದಲ್ಲಿ ನೆಲದನಿ ಬಳಗದ ಎಂ.ಸಿ.ಲಂಕೇಶ್ ಮಂಗಲ ಸೇರಿದಂತೆ 60 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಸ್ಪಂದನ ಆಸ್ಪತ್ರೆ ನಿರ್ದೇಶಕ ಡಾ.ಆದಿತ್ಯಗೌಡ ಐ.ಸಿ ಮತ್ತಿತರರು ಉಪಸ್ಥಿತರಿದ್ದರು.