ರಾಜ್ಯದಲ್ಲಿ ನಾನು ದೊಡ್ಡ ಮಟ್ಟದ ಹೋರಾಟ ಮಾಡಬೇಕು, ನೀವು ಒಪ್ಪಿಗೆ ಕೊಡಬೇಕು. ನೀವು ಒಪ್ಪಿಗೆ ಕೊಟ್ಟರೆ ಮಾತ್ರ ನಾನು ಪಕ್ಷ ಬಲಪಡಿಸುವ ಕೆಲಸ ಮಾಡಬಹುದು ಎಂದು ಹೆಚ್.ಡಿ ಕುಮಾರಸ್ವಾಮಿ ಜೆಡಿಎಸ್ ಮುಖಂಡರನ್ನು ಕೇಳಿಕೊಂಡರು.
ಚನ್ನಪಟಣ ವಿಧಾನಸಭೆ ಕ್ಷೇತ್ರದ ಮುಖಂಡರ ಜೊತೆ ಲೋಕಸಭಾ ಚುನಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಅವರು, ಚನ್ನಪಟ್ಟಣ ಕಾರ್ಯಕರ್ತರಾದ ನೀವು ಕೇಳಿದಾಗ ಬಂದು ನಾನು ನಿಮ್ಮ ಜತೆ ನಿಂತಿದ್ದೇನೆ. ನಿಮ್ಮ ನನ್ನ ನಡುವಿನ ಸಂಬಂಧ ತಾಯಿ ಮಗನ ಸಂಬಂಧ, ನನ್ನನ್ನು ಮಗನಂತೆ ಕಂಡಿದ್ದೀರಿ. ರಾಜ್ಯದಲ್ಲಿ ಪಕ್ಷ ಉಳಿಸುವ ಸಮಯ ಬಂದಿದೆ. ಅದಕ್ಕೆ ನಿಮ್ಮ ಸಹಕಾರವೂ ಬೇಕು, ಪಕ್ಷಕ್ಕಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕು. ಈ ಜೀವ ಇರುವ ತನಕ ನಾನು ಚನ್ನಪಟ್ಟಣ, ರಾಮನಗರ ಬಿಡುವ ಪ್ರಶ್ನೆ ಇಲ್ಲ. ನನ್ನ ಹೋರಾಟ ಇಲ್ಲಿಗೇ ನಿಲ್ಲುವುದಿಲ್ಲ ಎಂದು ಹೇಳಿದರು.
ಆದರೆ, ಕೆಲವರು ನೀವು ಚನ್ನಪಟ್ಟಣದಲ್ಲಿಯೇ ಇರಬೇಕು ಎಂದು ಎಚ್ಡಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದಾಗ ಕಾರ್ಯಕರ್ತರನ್ನು ಸಮಾಧಾನಿಸಿ, ಪಕ್ಷವನ್ನು ಬಲಪಡಿಸುವ ಅನಿವಾರ್ಯತೆಯನ್ನು ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಮನವರಿಕೆ ಮಾಡಿಕೊಟ್ಟರು.
ಈ ವೇಳೆ ಎಲ್ಲಾ 28 ಕ್ಷೇತ್ರಗಳನ್ನು ಗೆಲ್ಲಬೇಕು, ಇದು ನಮ್ಮ ಮೈತ್ರಿಕೂಟದ ಗುರಿ. ಪಕ್ಷದ ಉಳಿವಿನ ದೃಷ್ಟಿಯಿಂದ ನಾವು ನಿರ್ಧಾರ ತೆಗೆದುಕೊಳ್ಳಲೇಬೇಕು. ನಾನು ಎದುರಿಸಿದ ವೈಯಕ್ತಿಕ ರಾಜಕೀಯ ಸವಾಲುಗಳನ್ನು ನೀವೇ ನೋಡಿದ್ದೀರಿ. ಕಷ್ಟ ಕಾಲದಲ್ಲಿ ನನ್ನ ಕೈ ಹಿಡಿದಿದ್ದೀರಿ ಎಂದರು. ಕುಮಾರಸ್ವಾಮಿ ಅವರ ಮಾತಿಗೆ ಸಭೆಯಲ್ಲಿ ಬಹುತೇಕರು ಸಹಮತ ವ್ಯಕ್ತಪಡಿಸಿದರು. ಅನೇಕ ಮುಖಂಡರು ಪಕ್ಷ ಉಳಿಸಲು ತಮ್ಮ ನಿರ್ಧಾರಕ್ಕೆ ಬದ್ಧ ಎಂದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ವಿಜಯಿಯಾದರೆ, ಚನ್ನಪಟ್ಟಣ ಕ್ಷೇತ್ರವು ಜೆಡಿಎಸ್ ತೆಕ್ಕೆಯಲ್ಲಿಯೇ ಉಳಿಯಲಿದೆ. ನೀವ್ಯಾರು ಭಯಪಡುವ ಅಗತ್ಯವಿಲ್ಲ, ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯೇ ಸ್ಪರ್ಧೆ ಮಾಡುತ್ತಾರೆಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ಪಾಲಾಗಿದೆ. ಈ ಹಿನ್ನೆಲೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆ ಇದೆ. ನಿಖಿಲ್ ಕುಮಾರಸ್ವಾಮಿ ಹೆಸರು ಕೇಳಿಬರುತ್ತಿದ್ದರು ಕೂಡ ಅಂತಿಮವಾಗಿ ಎಚ್ಡಿ ಕುಮಾರಸ್ವಾಮಿ ಅವರೇ ಕಣಕ್ಕಿಳಿಯಲಿದ್ದಾರೆ.