ತಂತೈ ಪೆರಿಯಾರ್ ದ್ರಾವಿಡ ಕಾಳಗಂ(ಟಿಪಿಡಿಕೆ) ಕಾರ್ಯಕರ್ತರ ಮೇಲೆ ಕೊಯಂಬತ್ತೂರು ಮೂಲದ ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ಕಾರ್ಯಕರ್ತರು ದಾಳಿ ನಡೆಸಿದ ಆರೋಪದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೊಯಂಬತ್ತೂರಿನ ಇಕ್ಕರೈ ಬೊಲುವಮ್ಪಟ್ಟಿ ಗ್ರಾಮದ ಸ್ಮಶಾನದಲ್ಲಿ ಅಕ್ರಮವಾಗಿ ನಿರ್ಮಾಣ ಕಾಮಗಾರಿ ನಿರ್ಮಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಟಿಪಿಡಿಕೆ ಕಾರ್ಯಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ ಇಶಾ ಫೌಂಡೇಷನ್ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.
ದೂರಿನ ಆಧಾರದ ಮೇಲೆ ಇಶಾ ಯೋಗ ಸಂಸ್ಥೆ ಹಾಗೂ ಆದಿವಾಸಿ ಹಕ್ಕುಗಳ ಸಂಸ್ಥೆಯಾದ ವೆಲ್ಲನ್ಗಿರಿ ಕಣಿವೆ ಬುಡಕಟ್ಟು ಸಂರಕ್ಷಣ ಸಮಾಜದ ನಡುವೆಯಿರುವ 44.3 ಎಕರೆ ಭೂಮಿಯಲ್ಲಿ ವಿವಾದಿದ ಸ್ಮಶಾನದ ಭೂಮಿಯಿದೆ ಎನ್ನಲಾಗಿದೆ.
ಪೊಲೀಸರಿಗೆ ದೂರು ನೀಡಿರುವ ಟಿಪಿಡಿಕೆಯ ಪ್ರಧಾನ ಕಾರ್ಯದರ್ಶಿ ಅವರ ಪ್ರಕಾರ, ಇಶಾ ಯೋಗ ಸಂಸ್ಥೆಯ ವ್ಯಕ್ತಿಗಳು ತಮ್ಮ ವಾಹನವನ್ನು ಅಡ್ಡಗಟ್ಟಿ ತಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದರ ಜೊತೆ ತಮ್ಮ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಅಲನ್ದೊರೈ ಪೊಲೀಸ್ ಠಾಣೆಯಲ್ಲಿ ಇಶಾ ಯೋಗ ಸಂಸ್ಥೆ ವಿರುದ್ಧ ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಈ ನಡುವೆ ಇಶಾ ಯೋಗ ಕೇಂದ್ರ ಟಿಪಿಡೆಕೆ ಕಾರ್ಯಕರ್ತರ ಆರೋಪಗಳನ್ನು ನಿರಾಕರಿಸಿದ್ದು, ತಾವು ನಿರ್ಮಿಸುತ್ತಿರುವ ಪ್ರದೇಶದಲ್ಲಿ ಕೋರ್ಟ್ ಅಥವಾ ರಾಜ್ಯ ಸರ್ಕಾರದ ಅನುಮತಿ ಪಡೆದು ಆಗಮಿಸಿರಲಿಲ್ಲ. ಅಲ್ಲದೆ ತಾವು ಈ ಪ್ರದೇಶಕ್ಕೆ ಕಾರ್ಯಕರ್ತರು ಆಗಮಿಸದಂತೆ ಕೋರ್ಟ್ನಿಂದ ಮಧ್ಯಂತರ ತಡೆ ತಂದಿರುವುದಾಗಿ ತಿಳಿಸಿದೆ.
ಇಶಾ ಯೋಗ ಸಂಸ್ಥೆ ಆದಿವಾಸಿಗಳ ಭೂಮಿಯನ್ನು ಅತಿಕ್ರಮಿಸಿ ಹಲವು ಕಟ್ಟಡಗಳನ್ನು ನಿರ್ಮಿಸಿದೆ ಎಂದು ವೆಲ್ಲನ್ಗಿರಿ ಕಣಿವೆ ಬುಡಕಟ್ಟು ಸಂರಕ್ಷಣ ಸಮಾಜ 2016ರಲ್ಲಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇಕ್ಕರೈ ಬೊಲುವಮ್ಪಟ್ಟಿ ಗ್ರಾಮದಲ್ಲಿ 150 ಎಕರೆ ಕ್ಯಾಂಪಸ್ಅನ್ನು ಕೂಡ ನಿರ್ಮಿಸಿದ್ದು, ಇದಕ್ಕೆ ಜಿಲ್ಲಾಡಳಿತ, ಸಂಬಂಧಪಟ್ಟ ಪ್ರಾಧಿಕಾರಗಳಿಂದ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದೆ.
ಅಲ್ಲದೆ ಇಶಾ ಸಂಸ್ಥೆಯ ಕ್ಯಾಂಪಸ್ ಈ ಪ್ರದೇಶವು ಆನೆಗಳು ವಾಸಿಸುವ ನೀಲಗಿರಿ ಜೈವಿಕ ಮೀಸಲು ಪ್ರದೇಶದಲ್ಲಿದೆ. 2016ರಿಂದಲೂ ವೆಲ್ಲನ್ಗಿರಿ ಕಣಿವೆ ಬುಡಕಟ್ಟು ಸಂರಕ್ಷಣ ಸಮಾಜ ಇಶಾ ಸಂಸ್ಥೆಯ ಅಕ್ರಮಗಳ ಬಗ್ಗೆ ಹೋರಾಟ ನಡೆಸುತ್ತಿದೆ. ಈ ನಡುವೆ ಮದ್ರಾಸ್ ಹೈಕೋರ್ಟ್ 2013 ಇಶಾ ಸಂಸ್ಥೆಯ ಭೂಖರೀದಿ ದಾಖಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.