ಮಂಡ್ಯದ ತಹಶೀಲ್ದಾರ್ ಕುಂಇ ಅಹಮದ್ ಅವರು ಎಫ್ಐಆರ್ ಅಸ್ತ್ರ ಬಳಸಿ ತಮ್ಮ ವಿರುದ್ಧ ಮಾತನಾಡುವವರನ್ನು ಮೌನವಾಗಿಸುತ್ತಿದ್ದಾರೆ ಎಂಬುದು ಮಂಡ್ಯ ತಾಲ್ಲೂಕಿನ ಜನರ ಅಭಿಪ್ರಾಯವಾಗಿದೆ.
ನದೀಮ್ ಅಹಮ್ಮದ್ ಎಂಬ ವಕೀಲರು ತಹಶೀಲ್ದಾರ್ ಕೋರ್ಟ್ ನಡೆಯುವಾಗ ತಮ್ಮ ಕಕ್ಷಿದಾರರ ಪರವಾಗಿ ಏರು ಧ್ವನಿಯಲ್ಲಿ ಮಾತನಾಡಿದರು ಎಂದು ಅವರ ವಿರುದ್ಧ ಎಫ್ಐಆರ್ ಮಾಡಿಸಿದ್ದರು. ಈಗ ರವೀಂದ್ರ ಎನ್ನುವವರು ಲೋಕಾಯುಕ್ತ ಸಂಸ್ಥೆಗೆ ದೂರು ಕೊಟ್ಟ ಕಾರಣ, ಅವರ ವಿರುದ್ದ ಎಫ್ಐಆರ್ ಮಾಡಿಸಿದ್ದಾರೆ ಎನ್ನುವುದು ಸಾರ್ವಜನಿಕರಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ನಾಗಮಂಗಲದ ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ, ಕೆ.ಆರ್.ಎಸ್ ಪಕ್ಷದವರು ಚಳವಳಿ ಮಾಡಲು ಮುಂದಾದಾಗ, ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆಂದು ತಹಸೀಲ್ದಾರ್ ಕುಂಇ ಅಹಮದ್ ಅವರು ದೂರು ನೀಡಿ ಎಫ್ಐಆರ್ ದಾಖಲಿಸಿದ್ದರು.
ತಮ್ಮ ಪರವಾಗಿ ಜನರನ್ನು, ಸಂಘ, ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಭಟನೆ ಮಾಡಿಸುವುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿರುವ ತಹಶೀಲ್ದಾರ್ ಅವರು ಸಕ್ರಿಯ ರಾಜಕಾರಣಕ್ಕೆ ಬಂದರೆ ಒಳ್ಳೆಯ ಪಳಗಿದ ರಾಜಕಾರಣಿ ಆಗುತ್ತಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.