ಸಂಘಟಿತ ಮಹಿಳೆಯರು ಜಾನಪದ ಸೇವಾ ಕಾರ್ಯದೊಂದಿಗೆ ಸಮಾಜಮುಖಿ ಕೆಲಸಗಳಿಗೂ ಆದ್ಯತೆ ನೀಡಬೇಕೆಂದು ಮನ್ಮುಲ್ ಉಪ ವ್ಯವಸ್ಥಾಪಕಿ ಶೈಲಜಾ ಸಲಹೆ ನೀಡಿದರು.
ಮಂಡ್ಯನಗರದ ಕರ್ನಾಟಕ ಸಂಘದಲ್ಲಿ ಜಾನಪದ ಜನ್ನೆಯರು ಸಂಸ್ಥೆ ಆಯೋಜಿಸಿದ್ದ ಅಧಿಕಾರ ಹಸ್ತಾಂತರ ಹಾಗೂ ನೂತನ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಸಂಘಟನೆಗೊಂಡು ಜಾನಪದ ಉಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿ ಜಾನಪದ ಜನ್ನೆಯರು ಎಂಬ ಸಂಘಟನೆಯನ್ನು ಕಟ್ಟಿ, ಸಂಘದ ರಿಜಸ್ಟರ್ ಮಾಡಿಸಿರುವುದು ಶ್ಲಾಘನೀಯ, ಎಲ್ಲ ಮಹಿಳೆರೂ ಒಗ್ಗೂಡಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ನುಡಿದರು.
ಸೇವಾ ಕಾರ್ಯಗಳಲ್ಲಿ ರಕ್ತದಾನ, ಅನಾಥ ಮಕ್ಕಳಿಗೆ ನೆರವು, ಬಡವರಿಗೆ ವೃದ್ದರಿಗೆ ಸಹಾಯಹಸ್ತ ನೀಡುವುದು ಉತ್ತಮ. ಅಲ್ಲೂ ಜಾನಪದ ಕಾರ್ಯಕ್ರಮಗಳನ್ನು ಮಾಡಿ, ಅವರಿಗೂ ಮನರಂಜನೆ ಲಭ್ಯವಾಗುತ್ತದೆ ಎಂದರು.
ಜಾನಪದ ಜನ್ನೆಯರು ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ ಡಾ.ಸುಜಾತ ಅಕ್ಕಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಮೂಡಲಪಾಯ ಯಕ್ಷಗಾನ ಅಕಾಡೆಮಿ ಸ್ಥಾಪನೆಗೊಂಡು ಮೈಸೂರು ಪ್ರಾಂತ್ಯದಲ್ಲಿದ್ದ ಜಾನಪದ ಪ್ರಕಾರವಾದ ಮೂಡಪಾಯ ಯಕ್ಷಗಾನ ಪುನರುತ್ಥಾನ ಪಡೆಯಲಿ, ಎಲ್ಲರೂ ಸಹಕರಿಸೋಣ, ಕಲಾವಿದರಿಂದ ಜಾನಪದ ಉಳಿದು ಬೆಳೆಯುತ್ತಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷೆ ಡಾ. ಸುಜಾತ ಅಕ್ಕಿ ಅವರು ನೂತನ ಅಧ್ಯಕ್ಷೆ ಡಾ.ಎಸ್.ಸಿ. ಮಂಜುಳಾ ಅವರಿಗೆ ಬುಜ್ಜಣಿಗೆ ಬುಟ್ಟಿ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.ಕಾರ್ಯಕ್ರಮದಲ್ಲಿ ಜಾನಪದ ಜನ್ನೆಯರು ಸಂಸ್ಥೆಯ ಪದಾಧಿಕಾರಿಗಳಾದ ಡಾ.ಕೆಂಪಮ್ಮ, ಡಾ.ದೇವಿಕಾ, ಪ್ರೊ.ಉಷಾರಾಣಿ, ಮಾನಸ, ಡಾ.ರಮಾ, ಡಾ.ಅನುಸೂಯ, ಡಾ.ಪೂರ್ಣಿಮಾ ಹಾಗೂ ಮಹಿಳಾಪರ ಚಿಂತಕಿ ನಾಗರೇವಕ್ಕ, ಡಾ.ಆನಂದ ಮತ್ತಿತರರಿದ್ದರು.