ಕೆ.ಆರ್.ಪೇಟೆ ತಾಲ್ಲೂಕಿನ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯುವ ಮಹಾ ಕುಂಭಮೇಳದ ಸಮಾರೋಪ ಕಾರ್ಯಕ್ರಮವನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸುವುದರ ಹಿಂದೆ ಅನೇಕ ರಾಜಕೀಯ ಲೆಕ್ಕಾಚಾರಗಳು ಅಡಗಿದೆ.
ಹೇಳಿ ಕೇಳಿ ಯೋಗಿ ಆದಿತ್ಯನಾಥ್ ಉಗ್ರ ಹಿಂದುತ್ವದ ಪ್ರತಿಪಾದಕ. ಕಳೆದ ಬಾರಿ ಉತ್ತರಪ್ರದೇಶದ ಚುನಾವಣೆಯಲ್ಲಿ ಉಗ್ರ ಹಿಂದುತ್ವವನ್ನು ಇಟ್ಟುಕೊಂಡು ಮತ್ತೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾದವರು. ಇಂತಹ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಅವರನ್ನು ಕುಂಭಮೇಳಕ್ಕೆ ಕರೆತಂದು ಹಿಂದೂ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವುದು ಬಿಜೆಪಿ ಪಕ್ಷದ ಕಾರ್ಯತಂತ್ರ. ಅಲ್ಲದೆ 2023 ರ ಚುನಾವಣೆ ಆರೇಳು ತಿಂಗಳಷ್ಟೇ ಇರುವುದರಿಂದ,ರಾಜ್ಯ ಸರ್ಕಾರಕ್ಕೆ ಹಗರಣಗಳ ಸರಮಾಲೆ ಮೆತ್ತಿಕೊಂಡಿರುವುದರಿಂದ ಅವರನ್ನು ಕರೆಸಿ ಬಿಜೆಪಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಉದ್ದೇಶ ಇದರ ಹಿಂದಿದೆ.
ಈ ಹಿನ್ನೆಲೆಯಲ್ಲಿಯೇ ಸ್ವತಃ ಸಚಿವ ನಾರಾಯಣಗೌಡರೇ ಉತ್ತರಪ್ರದೇಶಕ್ಕೆ ತೆರಳಿ ಯೋಗಿ ಆದಿತ್ಯನಾಥ್ ಅವರನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದ್ದರು. ಅದರಂತೆ ಅವರು ಅ.16 ರಂದು ಸಮಾರೋಪ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ.
ಸರ್ಕಾರವೇ 4 ಕೋಟಿಯಷ್ಟು ಹಣವನ್ನು ಕೊಟ್ಟು ಕುಂಭಮೇಳ ಮಾಡಿಸುತ್ತಿದೆ. ಇನ್ನೂ ಉಗ್ರ ಹಿಂದುತ್ವದ ಯೋಗಿ ಆದಿತ್ಯನಾಥ್ ನಾಥ ಪಂಥಕ್ಕೆ ಸೇರಿದವರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಇದೇ ನಾಥ ಪಂಥಕ್ಕೆ ಸೇರಿದವರು. ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸುವ ನಿರ್ಮಲಾನಂದನಾಥ ಸ್ವಾಮೀಜಿ, ಲಿಂಗಾಯತ ಸಮುದಾಯದ ಪುತ್ತೂರು ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಕುರುಬರ ನಿರಂಜನಾ ಕನಕ ಗುರು ಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿದಂತೆ ಹಲವು ಸಮುದಾಯಗಳನ್ನು ಪ್ರತಿನಿಧಿಸುವ ಸ್ವಾಮೀಜಿಗಳನ್ನು ಕರೆಸಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಜೊತೆಗೂಡಿಸಿದರೆ ಆಯಾ ಸಮುದಾಯದ ಮತ ಬ್ಯಾಂಕ್ ಗಳು ಗಟ್ಟಿಯಾಗುವ ತಂತ್ರಗಾರಿಕೆ ಇದರ ಹಿಂದಿದೆ.
ಹಿಂದೂಗಳ ಧಾರ್ಮಿಕ ಉತ್ಸವವಾಗಬೇಕಿದ್ದ ಕುಂಭಮೇಳ ಬಿಜೆಪಿ ಪಕ್ಷದ ಉತ್ಸವವಾಗಿ ನಡೆಯುತ್ತಿದೆ ಎಂಬುದು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ಸಚಿವರು, ಸಂಸದರು, ಶಾಸಕರು, ಇವರ ಪಟ್ಟಿಯನ್ನು ನೋಡಿದರೆ ಗೊತ್ತಾಗುತ್ತದೆ. ಇದು ಪಕ್ಕಾ ಬಿಜೆಪಿ ಉತ್ಸವ ಎಂದು. ಕಾಂಗ್ರೆಸ್,ಜೆಡಿಎಸ್ ಜನಪ್ರತಿನಿಧಿಗಳಲ್ಲಿ ಕೆಲವೇ ಕೆಲವು ಕಾಟಾಚಾರಕ್ಕೆ ಎಂಬಂತೆ ಆಹ್ವಾನಿಸಿದ್ದಾರೆ.
ಪ್ರಧಾನಿ ಅಭ್ಯರ್ಥಿ
ಈ ಹಿಂದೆಯೂ ಕೂಡ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯನ್ನು ಕುಂಭ ಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳ ಮೂಲಕವೇ ಪ್ರಚಾರಕ್ಕೆ ಕರೆತಂದು ಪ್ರಧಾನ ಮಂತ್ರಿ ಆಗಿ ಮಾಡಲಾಯಿತು.ಈಗ ಯೋಗಿ ಆದಿತ್ಯನಾಥ್ ಅವರನ್ನು ಮೋದಿಯವರಂತೆಯೇ ದೇಶದ ಎಲ್ಲೆಡೆ ಹೆಚ್ಚು ಪ್ರಚಾರವಾಗುವಂತೆ ಮಾಡಿ ಮೋದಿಯ ನಂತರ ಪ್ರಧಾನಮಂತ್ರಿ ಸ್ಥಾನದಲ್ಲಿ ಕೂರಿಸುವ ತಂತ್ರಗಾರಿಕೆ ಕೂಡ ಇದರ ಹಿಂದಿದೆ.
ಇದನ್ನೂ ಓದಿ : ಮೊದ್ಲು ಬಸ್ ನಿಲ್ದಾಣ ಸರಿ ಮಾಡ್ಸಿ ನಾರಾಯಣ ಗೌಡ್ರೇ…
ಅದಕ್ಕಾಗಿಯೇ ಕೆ.ಆರ್.ಪೇಟೆಯ ತ್ರಿವೇಣಿ ಸಂಗಮಕ್ಕೆ ನೂರಾರು ಸ್ವಾಮೀಜಿಗಳು, ಸಾಧು ಸಂತರನ್ನು ಕರೆತಂದು ಮಹಾ ಕುಂಭಮೇಳ ಮಾಡಿ ಯೋಗಿ ಆದಿತ್ಯನಾಥ್ ಅವರಿಂದ ಹಿಂದುತ್ವದ ಉಗ್ರ ಭಾಷಣ ಮಾಡಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಬಿಜೆಪಿಯ ಲೆಕ್ಕಾಚಾರ. ಇವೆಲ್ಲಾ ಹೇಗಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.