”ನಾನು ಹೊಸ ಕ್ಷೇತ್ರ ಹುಡುಕುತ್ತಿದ್ದೇನೆ ಎಂಬುದು ಯಾರದೋ ಕನಸು, ನನಗೆ ಹೊಸ ಕ್ಷೇತ್ರದ ಅವಶ್ಯಕತೆ ಇಲ್ಲ, ನಾನು ರಾಜಕೀಯಕ್ಕೆ ಬಂದಿರೋದೆ ಮಂಡ್ಯಕ್ಕಾಗಿ, ಬೇಕಾದ್ರೆ ರಾಜಕೀಯ ಬಿಡ್ತೀನಿ, ಆದ್ರೆ ಮಂಡ್ಯ ಬಿಡಲ್ಲ” ಎಂದು ಸಂಸದೆ ಸುಮಲತಾ ಸ್ಪಷ್ಟಪಡಿಸಿದರು.
ಮದ್ದೂರು ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲ್ಲ, ಮುಂದಿನ ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡಬೇಕೆಂಬ ಬಗ್ಗೆ ಯೋಚನೆ ಮಾಡಿಲ್ಲ, ಕಳೆದ ಲೋಕಸಭಾ ಚುನಾವಣೆಯಲ್ಲಿ, ಎಲ್ಲಾ ಪಕ್ಷಗಳಲ್ಲಿರುವ ಕೆಲವು ಮುಖಂಡರು ನನ್ನನ್ನು ಬೆಂಬಲಿಸಿದ್ದಾರೆ, ಹಾಗಾಗಿ ಯಾರಿಗೆ ಬೆಂಬಲ ನೀಡುವುದು.. ?. ಸುಮ್ಮನಿರಿವುದೇ ಒಳ್ಳೆಯದು ಎನಿಸುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಪುತ್ರ ಅಭಿಷೇಕ್ ಅಂಬರೀಶ್ ಸಿನಿಮಾ ಮಾಡಿಕೊಂಡಿದ್ದಾರೆ, ಸದ್ಯಕ್ಕೆ ಅವರನ್ನು ರಾಜಕೀಯಕ್ಕೆ ತರುವ ಯೋಚನೆ ಇಲ್ಲ ಎಂದರು.
ನನ್ನ ಬಗ್ಗೆ ಮಾತನಾಡಿದ್ರೆ ಕೆಲವರಿಗೆ ಪ್ರಚಾರ
ನಮ್ಮ ಬಗ್ಗೆ ಮಾತಾಡಿದ್ರೆ ಕೆಲವರಿಗೆ ಪ್ರಚಾರ ಸಿಗುತ್ತೆ, ಹಾಗಾಗಿ ಅವರು ಮಾತನಾಡುತ್ತಾರೆ. ಆದರೆ ನಾನೆಂದು ಅವರ ಬಗ್ಗೆ ಮಾತನಾಡುವುದಿಲ್ಲ, ಸುದ್ದಿಗಾರರು ಪ್ರಶ್ನಿಸಿದಾಗ ಮಾತ್ರ ನಾನು ಪ್ರತಿಕ್ರಿಯಿಸುತ್ತೇನೆ ಅಷ್ಟೆ. ಜಿಲ್ಲೆಯ ಕೆಲವು ರಾಜಕಾರಣಿಗಳು ರಾಜಕೀಯದಲ್ಲಿ ನನಗಿಂತ ಸೀನಿಯರ್ ಇದ್ದಾರೆ, ಅವರೇಕೆ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಟೀಕಿಸಿದರು.
ನರೇಗಾದಲ್ಲಿ ಕಳಪೆ ಸಾಧನೆ
ಮಂಡ್ಯ ಜಿಲ್ಲೆಯೂ ನರೇಗಾ ಯೋಜನೆಯಲ್ಲಿ ರಾಜ್ಯದಲ್ಲಿಯೇ ಕೊನೆಯ ಸ್ಥಾನದಲ್ಲಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ನನಗೆ ನೋವಿದೆ. ಈ ಹಿಂದೆ ಎಲ್ಲಾ ದಿಶಾ ಸಭೆಗಳಲ್ಲಿ ನಾನು ನರೇಗಾ ಯೋಜನೆಯಲ್ಲಿ ಹಿಂದಿಳಿದರುವ ಮಂಡ್ಯದ ಬಗ್ಗೆ ಸಾಕಷ್ಟು ಭಾರಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದ್ದೇನೆ. ಬೇರೆ ಜಿಲ್ಲೆಗಳು ನರೇಗಾದಲ್ಲಿ ಮುಂದಿರುವಾಗ ನಮ್ಮ ಜಿಲ್ಲೆ ಏಕೆ ಹಿಂದುಳಿದಿದೆ ಎಂದು ಕೇಳುತ್ತಿದ್ದೆ. ಈ ಬಗ್ಗೆ ಅಧಿಕಾರಿಗಳ ವಿಶೇಷ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದರು.
ಮಂಡ್ಯ ಅಭಿವೃದ್ಧಿಗೆ ಪ್ಯಾಕೇಜ್ ಪ್ರಸ್ತಾವನೆ
ಮಂಡ್ಯ ಜಿಲ್ಲೆಯ ರಸ್ತೆಗಳು, ಪ್ರವಾಸೋದ್ಯಮ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳಿಗೆ ಸುಮಾರು 300 ಕೋಟಿ ರೂ.ಗಳ ಸಮಗ್ರ ಪ್ಯಾಕೇಜ್ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಶೀಘ್ರದಲ್ಲೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.