ಟಿಪ್ಪುವನ್ನು ಕೊಂದವರು ಉರಿಗೌಡ ನಂಜೇಗೌಡ ಎಂಬುವುದೇ ಸತ್ಯವಾಗಿದ್ದರೆ ಅವರ ವಂಶಸ್ಥರೇಕೆ ಪತ್ತೆಯಾಗಿಲ್ಲ? ಅಂದಿನ ಕಾಲಘಟ್ಟದಲ್ಲಿ ರಾಜರನ್ನು ಕೊಂದವರೇ ರಾಜರಾಗುವ ಪರಿಪಾಠವಿತ್ತು. ಒಂದು ವೇಳೆ ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳೇ ಟಿಪ್ಪುವನ್ನು ಕೊಂದಿದ್ದರೆ ಅವರೇಕೆ ರಾಜರಾಗಲಿಲ್ಲ ? ಆಗಿದ್ದ ಮೇಲೆ ಅವರ ಹೆಸರುಗಳು ಎಲ್ಲೂ ಉಲ್ಲೇಖವಾಗಿಲ್ಲ ಏಕೆ ? ಈ ಬಗ್ಗೆ ನಿಮ್ಮಲ್ಲಿ ದಾಖಲೆಗಳಿದ್ದರೆ ಅದನ್ನು ಸಾಬೀತುಪಡಿಸಿ ಎಂದು ಇತಿಹಾಸ ತಜ್ಞ ಚಿಕ್ಕರಂಗೇಗೌಡ ಬಿಜೆಪಿ ಹಾಗೂ ಸಂಘ ಪರಿವಾರದ ಮುಖಂಡರಿಗೆ ಸವಾಲು ಹಾಕಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪುವಿನ ಹುಟ್ಟಿನಿಂದ ಮರಣದ ಉರಿಗೌಡ, ನಂಜೇಗೌಡ ಎಂಬ ವ್ಯಕ್ತಿಗಳೇ ಬರುವುದಿಲ್ಲ. ಟಿಪ್ಪು ಹಿಂದುಳಿದವರ, ದಲಿತರ, ಮಹಿಳೆಯರ ಪರವಾಗಿ ಹಲವು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದರು. ಇದರಿಂದಾಗಿ ಒಕ್ಕಲಿಗರು ಸೇರಿದಂತೆ ಎಲ್ಲಾ ಜನಾಂಗದವರು ಅವರನ್ನು ಗೌರವದಿಂದ ಕಾಣುತ್ತಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ವಿಶೇಷವಾಗಿ ದಲಿತರು, ಒಕ್ಕಲಿಗರಿಗೆ ಭೂ ಒಡೆತನದ ಹಕ್ಕನ್ನು ನೀಡಿದ್ದರು ಎಂದು ವಿವರಿಸಿದರು.
ಒಂದು ವೇಳೆ ಟಿಪ್ಪು ಇತರೆ ಪ್ರದೇಶಗಳ ಮೇಲೆ ದಾಳಿ ಮಾಡಿ ಸಂಪತ್ತನ್ನು ಕೊಳ್ಳೆ ಹೊಡೆದಿದ್ದರೆ, ಆತ ಬ್ರಿಟಿಷರಿಗೆ ಹಣ ನೀಡುತ್ತಿದ್ದನೆ ಹೊರತು, ತನ್ನ ಮಕ್ಕಳನ್ನು ಒತ್ತೆ ಇಡುತ್ತಿರಲಿಲ್ಲ. ಟಿಪ್ಪುವಿನ ಮರಣದ ನಂತರ ಆತನ ಮಕ್ಕಳನ್ನು ಪಶ್ಚಿಮ ಬಂಗಾಳಕ್ಕೆ ಗಡಿಪಾರು ಮಾಡಲಾಯಿತು. ಒಂದು ವೇಳೆ ಟಿಪ್ಪುವಿನ ಮಕ್ಕಳು ಇಲ್ಲೇ ಇದ್ದರೆ ಅವರಿಗೆ ಇಲ್ಲಿನ ಸ್ಥಳೀಯ ಜನರ ಬೆಂಬಲ ದೊರೆಯುತ್ತದೆ ಎಂಬ ಭಯದಿಂದ ಅವರನ್ನು ಬ್ರಿಟೀಷರು ಗಡಿಪಾರು ಮಾಡಿದರು. ಇದರಿಂದ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಚಾರವೆಂದರೆ ಟಿಪ್ಪುವಿನ ಜನಪ್ರಿಯತೆಗೆ ಕಂಗಾಲಾಗಿದ್ದ ಬ್ರಿಟಿಷರು ಅವರ ವಂಶಸ್ಥರನ್ನು ಬೇರೆಡೆಗೆ ಗಡಿಪಾರು ಮಾಡಿದರು. ಟಿಪ್ಪು ಇಷ್ಟೊಂದು ಹೆಸರು ಮಾಡಿದ್ದ ಎಂದರೆ ಆತನೊಬ್ಬ ಜನಪರ ರಾಜನಾಗಿದ್ದ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬಹುದು ಎಂದು ವಿವರಿಸಿದರು.