Wednesday, September 18, 2024

ಪ್ರಾಯೋಗಿಕ ಆವೃತ್ತಿ

ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು

ರಾಜ್ಯದಲ್ಲಿ ನಡೆಯುತ್ತಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆಯ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದು,ಇದು ಯೋಗ ದಿನಾಚರಣೆಗಾಗಿ ರಾಜ್ಯಕ್ಕೆ ಬರುತ್ತಿರುವ ನರೇಂದ್ರ ಮೋದಿಯವರಿಗೆ ನೀಡುವ ಉಡುಗೊರೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಮಹೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ದೇಶದಲ್ಲಿ ವ್ಯಾಪಕವಾಗಿ ಜನರು ಬೆಂಬಲ ನೀಡುತ್ತಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಸಿಕ್ಕಿದ್ದು, ರಾಜ್ಯದಲ್ಲೂ ವಿಧಾನಪರಿಷತ್ ಚುನಾವಣೆ ಎಲ್ಲಾ ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾದಿಸಲಿದ್ದು,ವಿಧಾನ ಪರಿಷತ್ ನಲ್ಲೂ ಬಹುಮತ ಸಿಗಲಿದೆ ಎಂದರು. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪ್ರತಿಸ್ಪರ್ಧಿಗಳು ಹತಾಶರಾಗಿ ಮತದಾರರಿಗೆ ಆಮಿಷ ಒಡ್ಡುತ್ತಿದ್ದು, ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಹಣ ಹಂಚಿಕೆ

ದಕ್ಷಿಣ ಪದವೀಧರರ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಮತದಾರರಿಗೆ ಹಣ ಹಂಚಿಕೆ, ಔತಣಕೂಟ ಏರ್ಪಡಿಸುವುದು, ಡಿಜಿಟಲ್ ಆಪ್‌ಗಳ ಮೂಲಕ ಮತದಾರರ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆಗಳು ನಡೆಯುತ್ತಿವೆ. ಚುನಾವಣಾಧಿಕಾರಿಗಳು ಈ ಕೂಡಲೇ ಕ್ರಮ ವಹಿಸಬೇಕು. ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇವೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು.

87 ಸಾವಿರ ಮತದಾರರ ಭೇಟಿ

ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಅತೀ ಕಡಿಮೆ ಅಂತರದಿಂದ ಪರಾಜಿತರಾಗಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಕ್ಷದಿಂದ ಸಂಘಟನಾತ್ಮಕ ಪ್ರಯತ್ನ ಕೈಗೊಂಡಿದ್ದು, ಇದಕ್ಕಾಗಿ ದಕ್ಷಿಣ ಪದವೀಧರ ಕ್ಷೇತ್ರದಲ್ಲಿ 1600 ಘಟ ನಾಯಕರನ್ನು ನಿಯೋಜಿಸ ಲಾಗಿದ್ದು, ಪ್ರತಿಯೊಬ್ಬ ಘಟನಾಕಾರರು ತಲಾ 25 ಮತದಾರರನ್ನು ಭೇಟಿ ಮಾಡಿದ್ದು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಒಟ್ಟು 1.41ಲಕ್ಷ ಮತದಾರರಿದ್ದು, ಈ ಪೈಕಿ 87 ಸಾವಿರ ಮತದಾರರನ್ನು ಖುದ್ದು ಭೇಟಿ ಮಾಡಲಾಗಿದ್ದು, ಜಯ ಗಳಿಸುವ ವಿಶ್ವಾಸವಿದೆ ಎಂದರು.

ಸಿದ್ದರಾಮಯ್ಯರದ್ದು ವಿಕೃತ ಮನಸ್ಸು

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರದ್ದು ವಿಕೃತ ಮನಸ್ಸು. ಬುರುಡೆಗೂ-ನಾಲಿಗೆಗೂ ಕನೆಕ್ಟಿವಿಟಿ ಇಲ್ಲ. ಇದಕ್ಕೆ ಮದ್ದಿಲ್ಲ. ಇದನ್ನು ಸರಿಮಾಡಲು ಸಾಧ್ಯವಿಲ್ಲ. ಆರ್.ಎಸ್.ಎಸ್. ಬಗ್ಗೆ ಅವರಿಗೆ ಅರಿವಿಲ್ಲ ಎಂದರೆ ಭಾರತದ ಬಗ್ಗೆ ಅರಿವಿಲ್ಲ ಎಂದೇ ಅರ್ಥ ಎಂದು ಹರಿಹಾಯ್ದರು.

ಅಂಬೇಡ್ಕರ್ ಬಗ್ಗೆ ಗೌರವವಿದೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗೆ ಅಪಾರವಾದ ಗೌರವವಿದೆ. ಅವರು ಹಾಕಿಕೊಟ್ಟ ದಾರಿ ಯಲ್ಲೇ ನಾವು ನಡೆ ಯುತ್ತಿದ್ದೇವೆ. ಅಂಬೇಡ್ಕರ್ ಬಗ್ಗೆ ಯಾರೇ ಹಗುರವಾಗಿ ಮಾತನಾಡಿದರೂ ಅದು ತಪ್ಪು. ಅಂಬೇ ಡ್ಕರ್ ಅವರು ಭೇಟಿ ನೀಡಿದ ಐದು ಸ್ಥಳಗಳನ್ನು ಪಂಚರತ್ನ ಸ್ಥಳಗಳನ್ನಾಗಿ ಬಿಜೆಪಿ ಅಭಿವೃದ್ಧಿ ಪಡಿಸಯತ್ತಿದೆ. ಆಂಬೇಡ್ಕರ್ ಆದರ್ಶಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ.ಸೂರ್ಯ-ಚಂದ್ರ ಇರುವ ತನಕ ಅಂಬೇಡ್ಕರ್ ಸಿದ್ದಾಂತ ಇರುತ್ತದೆ. ಅದನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್ ಮಾತನಾಡಿ, ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮೈ.ವಿ‌ ರವಿಶಂಕರ್ ಪರ ಉತ್ತಮ ಜನಾಭಿಪ್ರಾಯ ವ್ಯಕ್ತವಾಗಿದ್ದು, ಅವರು ಹೆಚ್ಚು ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿದ್ದರಾಮಯ್ಯ,ಚಂದಗಾಲು ಶಿವಣ್ಣ,ಅಶೋಕ್ ಜಯರಾಂ, ಮಾಜಿ ಅಧ್ಯಕ್ಷ ಕಾಡೇನಹಳ್ಳಿ ನಾಗಣ್ಣಗೌಡ, ಹಾಗೂ ಸಿ.ಟಿ.ಮಂಜುನಾಥ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!