ಹನಿಯಂಬಾಡಿ ಜಗದೀಶ್
ಕಾವೇರಿ ಕಣಿವೆಯಲ್ಲಿ ಎಡೆಬಿಡದೇ ಸುರಿಸುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ಉಪನದಿಗಳಾದ ಹಾರಂಗಿ, ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ ನದಿಗಳು ಮೈದುಂಬಿ ಹರಿಯುತ್ತಿವೆ, ಇದರಿಂದಾಗಿ ಕಾವೇರಿ ನದಿಗೆ ಜೀವಕಳೆ ಮರುಗಳಿಸಿದೆ, ಸಹಜವಾಗಿಯೇ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದರಿಂದ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದ ಬಳಿಯ ಗಗನಚುಕ್ಕಿ ಜಲಪಾತ ಹಾಗೂ ಭರಚುಕ್ಕಿ ಜಲಪಾತಗಳು ಬೋರ್ಗರೆದು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಸುಮಾರು 300 ಅಡಿ ಎತ್ತರದಿಂದ ಧಮ್ಮಿಕ್ಕಿ ಹರಿಯುವ ಈ ಜಲಪಾತವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲ ಜನತೆಯಲ್ಲದೇ, ರಾಜ್ಯದ ವಿವಿಧೆಡೆಯಿಂದ ಪ್ರವಾಸಿಗಳು ಹರಿದು ಬರುತ್ತಿದ್ದಾರೆ. 2-3 ವರ್ಷಗಳಿಂದ ಮಳೆ ಇಲ್ಲದೆ ಜಲಪಾತದ ಜೀವಕಳೆಯೇ ಮಾಯವಾಗಿತ್ತು, ಆದರೆ ಈ ಮುಂಗಾರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದಿಂದ ಜಲಪಾತದ ಸೊಬಗು ಇಮ್ಮಡಿಯಾಗಿದೆ.
ಪ್ರಸ್ತುತ ಕೆ.ಆರ್.ಎಸ್ ಅಣೆಕಟ್ಟೆಯ ನೀರಿನ ಮಟ್ಟ 110.60 ಅಡಿಗೆ ತಲುಪಿದ್ದು, ಒಳಹರಿವಿನ ಪ್ರಮಾಣ 36,674 ಕ್ಯೂಸೆಕ್ಸ್ ಇದೆ, ಇದಲ್ಲದೇ ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಯ ಎಲ್ಲಾ ನಾಲೆಗಳಿಗೆ 2,361 ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ಎಲ್ಲಾ ಹಳ್ಳ-ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ.