ಭಾರತದೇಶಕ್ಕೆ ನವಬೆಳಕು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು “ನವಭಾರತದ ಗೌತಮಬುದ್ಧ” ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅಭಿಪ್ರಾಯಪಟ್ಟರು.
ಮಂಡ್ಯ ನಗರದ ಮಿಮ್ಸ್ ಉಪನ್ಯಾಸ ಸಭಾಂಗಣದಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಯೋಜಿಸಿದ್ದ 74ನೇ ಸಂವಿಧಾನ ದಿನಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ವರ್ಷದ ಪರಿನಿಬ್ಬಾಣ ದಿನದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕಂಡ ಮಹಾಮಾನವತವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ತತ್ವಜ್ಞಾನ ಪ್ರಬುದ್ಧತೆ ಇದ್ದಂತಹ ದೊಡ್ಡ ವ್ಯಕ್ತಿ-ಶಕ್ತಿಯಾಗಿದ್ದರು, ಈ ದೇಶಕ್ಕೆ ನವ ಬೆಳೆಕನ್ನ ನೀಡಿದಂತಹ ನವ ಭಾರತದ ಗೌತಮ ಬುದ್ಧ ಎಂದು ನುಡಿದರು.
ಪ್ರಪಂಚದ ಬಹುತೇಕ ದೇಶಗಳು ವರ್ಣವ್ಯವಸ್ಥೆಯಿಂದ, ಧರ್ಮ- ಜಾತಿಯ ಉದ್ದೇಶಕಾಗಿ, ಬೇರೆ ಬೇರೆ ಕಾರಣಗಳ ತೊಳಲಾಟದಿಂದ ಬಳಲುತ್ತಿರುವವರಿಗೆ ಅಂಬೇಡ್ಕರ್ ಅವರ ಐಡಾಲಜಿ ಚಿಕಿತ್ಸೆಯಾಗಿ ಜನರಿಗೆ ಲಭ್ಯವಾಗುತ್ತಿದೆ, ಪರಿವರ್ತನೆಯ ಹಾದಿಯ ತೋರಿಸುತ್ತಿದೆ ಎಂದು ತಿಳಿಸಿದರು.
ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ಯೋಗೇಂದ್ರಕುಮಾರ್ ಮಾತನಾಡಿ, ಪರಿನಿಬ್ಬಾಣ ದಿನ ಎನ್ನುವ ವಿಷಯ ಎಷ್ಟೋ ಮಂದಿಗೆ ತಿಳಿದಿಲ್ಲ, ಪರಿನಿಬ್ಬಾಣ, ಪರಿನಿರ್ವಾಣ ಎನ್ನುವುದು ಪ್ರಾಕೃತ ಭಾಷೆಯ ಪದವಾಗಿದೆ, ಭಗವಾನ್ ಬುದ್ದರ ಕಾಲದಲ್ಲಿ ತುಂಬ ಪ್ರವರ್ತಮಾನದಲ್ಲಿದ್ದ ಭಾಷೆ ಪ್ರಾಕೃತಭಾಷೆಯ ಪದವೇ ಇದು, ಬೋಧಿಸತ್ವ ಪಡೆದ ಎಲ್ಲ ಭೌದ್ಧರು ಮಡಿದಾಗ ಪರಿನಿಬ್ಬಾಣವಾದರು ಎಂದು ಕರೆಯಲಾಗುತ್ತದೆ ಎಂದು ತಿಳಿಸಿದರು.
ಭಾರತದೇಶದಲ್ಲಿ ಹುಟ್ಟಿದ ಮಾನವತವಾದದ ವೈಜ್ಞಾನಿಕ ಧರ್ಮವೇ ಬೌದ್ಧಧರ್ಮವಾಗಿದೆ, ಬುದ್ಧರಿಂದ ಸ್ಥಾಪಿತಕೊಂಡ ವೈಜ್ಞಾನಿಕ ಸಂದೇಶಗಳ ಧರ್ಮವಾಗಿದೆ, ಕಾಲಾನಂತರ ಮರೆಯಾಗಿತ್ತು, ಅಂಬೇಡ್ಕರ್ ಅವರು ಶೋಧನೆ ನಡೆಸಿ, ಬೌದ್ಧಧರ್ಮಕ್ಕೆ ಮರುಹುಟ್ಟು ನೀಡುತ್ತಾರೆ, ಅವರು ಬೋಧಿಸತ್ವದೆಡೆಗೆ ಸಾಗಿ ಜೀವಂತಗೊಳಸಿದರು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ, ಪ್ರಮಾನವಚನ ಸ್ವೀಕರಿಸಲಾಯಿತು. ಗಣ್ಯರಿಗೆ ಸಂವಿಧಾನ ಓದು ಕೃತಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಿಮ್ಸ್ ನಿರ್ದೇಶಕ ಡಾ. ಬಿ.ಜೆ.ಮಹೇಂದ್ರ, ಪ್ರಾಂಶುಪಾಲ ಪಿ.ಎಸ್.ತಮ್ಮಣ್ಣ, ಮುಖ್ಯ ಆಡಳಿತಾಧಿಕಾರಿ ಕೆ.ಜಾನ್ಸನ್, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್, ಸ್ಥಾನೀಯ ಅಧೀಕ್ಷಕ ಡಾ.ವೆಂಕಟೇಶ್, ಶುಶ್ರೂಶಕ ಅಧೀಕ್ಷಕೆ ಜಯಭಾರತಿ, ಮಿಮ್ಸ್ನ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಎಲ್.ಎಲ್. ಕ್ಲೆಮಂಟ್, ಡಾ.ಹರೀಶ್, ಡಾ.ಸವಿತಾ ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿಗಳು ಮತ್ತಿತರರಿದ್ದರು.